ನರಗುಂದ: ‘ಸರ್ವಪಕ್ಷ ಸಭೆ ಮುಗಿದ ನಂತರ ಮುಂದಿನ ಹೋರಾಟದ ನಡೆ ನಿರ್ಧರಿಸಲಾಗುವುದು’ ಎಂದು ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು. ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 915ನೇ ದಿನವಾದ ಸೋಮವಾರ ಅವರು ಮಾತನಾಡಿದರು.
‘ಈಗಾಗಲೇ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿ, ಆದಷ್ಟು ಬೇಗ ಸರ್ವಪಕ್ಷ ಸಭೆ ನಡೆಸುವಂತೆ ಒತ್ತಡ ಹೇರಲಾಗಿದೆ.ಅವರಿಂದ ಸಕಾರಾತ್ಮಕ ಸ್ಪಂದನೆ ಲಭಿಸಿದೆ. ಮಹದಾಯಿಗೆ ಎಷ್ಟೇ ಅಡೆತಡೆಗಳು ಎದುರಾದರೂ ನಾವು ಜಗ್ಗುವುದಿಲ್ಲ. ಇದಕ್ಕೆ ತಾರ್ಕಿಕ ಅಂತ್ಯ ಕಾಣುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಅವರು ಪುನರುಚ್ಚರಿಸಿದರು.
‘ಮಹದಾಯಿ ಕುರಿತು ಈ ಭಾಗದ ರೈತರು ಎಚ್ಚೆತ್ತುಕೊಂಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಬವಣೆ, ಭಾವನೆ ಅರ್ಥಮಾಡಿಕೊಳ್ಳಬೇಕು. ಮಹದಾಯಿ ಯೋಜನೆ ಅನುಷ್ಠಾನವಾಗಬೇಕು. ಇಲ್ಲವಾದರೆ ಜನಪ್ರತಿನಿಧಿಗಳು ಇದರ ಪರಿಣಾಮ ಎದುರಿಸಲು ಸಿದ್ದರಾಗಬೇಕು’ ಎಂದರು.
‘ಕೂಡಲ ಸಂಗಮದಲ್ಲಿ ಹೊಸ ಪಕ್ಷ ಸ್ಥಾಪಿಸಲು ಸಮಾವೇಶ ಮಾಡುತ್ತಿದ್ದು ಸ್ವಾಗತಾರ್ಹ. ಇದರಿಂದ ಉತ್ತರ ಕರ್ನಾಟಕ ಅಭಿವೃದ್ಧಿಯಾದರೆ ಸಂತಸ. ಆದರೆ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಮಹದಾಯಿ ಬಳಕೆ ಮಾಡಿಕೊಳ್ಳಬಾರದು. ಮಹದಾಯಿ ಹೆಸರು ಬಳಸದೇ ಚುನಾವಣೆ ಎದುರಿಸಬೇಕು’ ಎಂದರು. ಗೋವಾದ ಜಲ ಸಂಪನ್ಮೂಲ ಸಚಿವ ಪಾಲ್ಯೇಕರ್ ಕನ್ನಡಿಗರ ಕ್ಷಮೆ ಕೋರಬೇಕು’ ಎಂದು ಸೊಬರದಮಠ ಆಗ್ರಹಿಸಿದರು.