ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ ಮೊಂಡುವಾದ ನಿಲ್ಲಿಸಲಿ

Last Updated 17 ಜನವರಿ 2018, 9:12 IST
ಅಕ್ಷರ ಗಾತ್ರ

ನರಗುಂದ: ‘ಮಹದಾಯಿ ವಿಚಾರದಲ್ಲಿ ಗೋವಾ ಸರ್ಕಾರ ಮೊಂಡುವಾದ ನಿಲ್ಲಿಸಬೇಕು. ಪದೇ ಪದೇ ಅಡ್ಡಗಾಲು ಹಾಕುವ ಪ್ರವೃತ್ತಿ ಮುಂದುವರಿದರೆ ರೈತರು ಶಕ್ತವಾದ ಹೋರಾಟ ಮಾಡಬೇಕಾಗುತ್ತದೆ’ ಎಂದು ಮಹದಾಯಿ ಹೋರಾಟ ಸಮಿತಿ ಸದಸ್ಯೆ ದೇವಕ್ಕ ತಾಳಿ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 916ನೇ ದಿನ ಮಂಗಳವಾರ ಅವರು ವೇದಿಕೆಯಲ್ಲಿ ಮಾತನಾಡಿದರು. ‘ಮಹದಾಯಿ ಸಮಸ್ಯೆ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳಿಂದ ಸಕಾರಾತ್ಮಕ ಸ್ಪಂದನೆ ಲಭಿಸುತ್ತಿಲ್ಲ. ಇದರಿಂದ ಈ ಭಾಗದ ರೈತರು ಪರಿತಪಿಸುವಂತಾಗಿದೆ. ಗೋವಾದ ಮುಖ್ಯಮಂತ್ರಿ ಒಂದು ರೀತಿ ಹೇಳಿಕೆ ನೀಡಿದರೆ, ಅದಕ್ಕೆ ವ್ಯತಿರಿಕ್ತವಾಗಿ ಅಲ್ಲಿನ ಜಲಸಂಪನ್ಮೂಲ ಸಚಿವರು ಹೇಳಿಕೆ ನೀಡಿದ್ದಾರೆ. ಇದನ್ನು ಸಹಿಸುವುದಿಲ್ಲ’ ಎಂದು ಅವರು ಹೇಳಿದರು.

‘ನ್ಯಾಯಮಂಡಳಿ ಈಗಾಗಲೇ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಿ ಎಂದು ಸೂಚಿಸಿದೆ. ಆದರೂ, ಗೋವಾ ಸರ್ಕಾರ ಈಗ ನ್ಯಾಯ
ಮಂಡಳಿಯೇ ಅಂತಿಮ ಎನ್ನುತ್ತಿದೆ. ಇಷ್ಟೊಂದು ಗಂಭೀರ ಸಮಸ್ಯೆ ಬಗ್ಗೆ ಮೂರು ರಾಜ್ಯಗಳು ತೀವ್ರ ನಿರ್ಲಕ್ಷ್ಯ ವಹಿಸಿರುವುದು ಅತ್ಯಂತ ನೋವಿನ ಸಂಗತಿ. ಇದರಿಂದ ಇವರು ಯಾರೂ ರೈತರ ಹಿತ ಬಯಸುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಪ್ರಧಾನಿ ಮಧ್ಯಸ್ಥಿಕೆ ವಹಿಸುವ ಮೂಲ ಮಹದಾಯಿಯನ್ನು ಮಲಪ್ರಭಾಕ್ಕೆ ಸೇರಿಸಬೇಕು’ ಎಂದು ಆಗ್ರಹಿಸಿದರು.

ಮಹದಾಯಿ ಹೋರಾಟ ಸಮಿತಿ ಸದಸ್ಯ ಶ್ರೀಶೈಲ ಮೇಟಿ ಮಾತನಾಡಿದರು. ‘ಮಹದಾಯಿಗೆ ಗೋವಾದ ಷಡ್ಯಂತ್ರ ಸಲ್ಲದು. ಗೋವಾ ಪದೇ ಪದೇ ತೊಂದರೆ ಕೊಟ್ಟಿದ್ದೇ ಆದರೆ , ಅದಕ್ಕೆ ಕನ್ನಡಿಗರು ತಕ್ಕ ಉತ್ತರ ನೀಡಬೇಕಾಗುತ್ತದೆ. ಗೋವಾದ ಮುಖ್ಯಮಂತ್ರಿಗಳು ಮಾತುಕತೆಗೆ ಸಿದ್ಧ ಎಂದು ಹೇಳಿ, ಈಗ ನ್ಯಾಯಮಂಡಳಿ ಮೇಲೆ ಹಾಕುತ್ತಿರುವುದು ಸರಿಯಲ್ಲ. ರಾಜ್ಯದ ಮುಖ್ಯಮಂತ್ರಿ ಹೆಚ್ಚಿನ ಕಾಳಜಿ ವಹಿಸಿ, ಸಮಸ್ಯೆ ಇತ್ಯರ್ಥಪಡಿಸಬೇಕು’ ಎಂದರು.

ಧರಣಿಯಲ್ಲಿ ಚಂದ್ರಗೌಡ ಪಾಟೀಲ, ಎಸ್‌.ಬಿ.ಜೋಗಣ್ಣವರ, ಚನ್ನಪ್ಪಗೌಡ ಪಾಟೀಲ, ವೆಂಕಪ್ಪ ಹುಜರತ್ತಿ, ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ,
ವೀರಣ್ಣ ಸೊಪ್ಪಿನ, ವೆಂಕಪ್ಪ ಹುಜರತ್ತಿ, ವೀರಣ್ಣ ಸೊಪ್ಪಿನ, ಹನಮಂತ ಸರನಾಯ್ಕರ, ವಿರೂಪಾಕ್ಷಿ ಚೆಲುವಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT