ಕುಶಾಲನಗರ: ಕಾವೇರಿ ತಾಲ್ಲೂಕು ರಚನೆ ಮಾಡುವ ಕುರಿತು ಫೆಬ್ರುವರಿಯಲ್ಲಿ ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್ನಲ್ಲಿ ಘೋಷಣೆ ಮಾಡುವಂತೆ ಒತ್ತಾಯಿಸಲು ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಲು ಮಂಗಳವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಇಲ್ಲಿನ ಕನ್ನಿಕಾ ಸಭಾಂಗಣದಲ್ಲಿ ಕಾವೇರಿ ತಾಲ್ಲೂಕು ಹೋರಾಟ ಕೇಂದ್ರೀಯ ಸಮಿತಿ ಸಭೆಯಲ್ಲಿ ತಾಲ್ಲೂಕು ರಚನೆ ಸಂಬಂಧ ಮುಂದೆ ಕೈಗೊಳ್ಳಬೇಕಾದ ಹೋರಾಟದ ಕುರಿತು ಚರ್ಚೆ ನಡೆಸಲಾಯಿತು.
‘25 ದಿನಗಳಿಂದ ವಿವಿಧ ಹಂತಗಳಲ್ಲಿ ನಡೆಸಿದ ಹೋರಾಟ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಮುಖ್ಯಮಂತ್ರಿಯಿಂದ ಕಾವೇರಿ ತಾಲ್ಲೂಕು ರಚನೆಗೆ ಸಕಾರತ್ಮಾಕ ಸ್ಪಂದನೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ತೀರ್ಮಾನಿಸಲಾಯಿತು’ ಎಂದು ವಿ.ಪಿ.ಶಶಿಧರ್ ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರಾದ ಜಿ.ಪರಮೇಶ್ವರ್ ಅವರು ಕೂಡ ಕಾವೇರಿ ರಚನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಹೋರಾಟಕ್ಕೆ ಆಡಳಿತಾರೂಢ ನಾಯಕರು ಒತ್ತಾಸೆಯಾಗುವ ಮೂಲಕ ಸರ್ಕಾರದ ಮಟ್ಟದಲ್ಲಿ ಒತ್ತಡ ಹಾಕುವ ಬದ್ಧತೆ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.
ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವಕೀಲ ಆರ್.ಕೆ.ನಾಗೇಂದ್ರ ಬಾಬು, ಸದಸ್ಯರಾದ ಎಸ್.ಕೆ.ಸತೀಶ್, ಅಬ್ದುಲ್ ಖಾದರ್, ಎಂ.ವಿ.ನಾರಾಯಣ, ಮುಸ್ತಾಫ್, ವಾಲ್ಲೂರು ಸ್ಥಾನೀಯ ಸಮಿತಿ ಅಧ್ಯಕ್ಷ ಮನುಮಹೇಶ್, ಕೊಡಗರಹಳ್ಳಿ ಸಮಿತಿ ಅಧ್ಯಕ್ಷ ಶಶಿಕಾಂತ್ ರೈ, ನಂಜರಾಯಪಟ್ಟಣದ ಬೋಪಣ್ಣ, ಮುಳ್ಳುಸೋಗೆ ಎಂ.ಕೆ.ಗಣೇಶ್ ಇದ್ದರು.