ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ನಾನು ನಟ, ಕುಶಲಕರ್ಮಿ: ಪ್ರಜಾವಾಣಿ ಸಂದರ್ಶನದಲ್ಲಿ ಇರ್ಫಾನ್ ಖಾನ್

ನಗರದ ಅತಿಥಿ
Last Updated 29 ಏಪ್ರಿಲ್ 2020, 8:05 IST
ಅಕ್ಷರ ಗಾತ್ರ
ಇಂದು ನಿಧನರಾದ ಖ್ಯಾತ ನಟ ಇರ್ಫಾನ್ ಖಾನ್ ಅವರು ‘ಪ್ರಜಾವಾಣಿ’ಗೆ 2018ರಲ್ಲಿ ವಿಶೇಷ ಸಂದರ್ಶನ ನೀಡಿದ್ದರು. ಪತ್ರಿಕೆಯ ಮೆಟ್ರೊ ಪುರವಣಿಯ ‘ನಗರದ ಅತಿಥಿ’ ವಿಭಾಗದಲ್ಲಿ 2018ರ ಜನವರಿ 18ರಂದು ಪ್ರಕಟವಾಗಿದ್ದ ಆ ಸಂದರ್ಶನವನ್ನು ಇಲ್ಲಿ ಯಥಾವತ್ ನೀಡಲಾಗಿದೆ.

***

ಬಾಲಿವುಡ್ ನಟ ಇರ್ಫಾನ್ ಖಾನ್, ಕೈಮಗ್ಗ ಮತ್ತು ಕರಕುಶಲ ವಸ್ತುಗಳಿಗೆ ತೆರಿಗೆ ಹೊರೆಯಿಂದ ಮುಕ್ತಿ ಕೊಡಬೇಕು ಎಂಬ ಆಶಯದ ಕರನಿರಾಕರಣೆ ಚಳವಳಿಯ ಭಾಗವಾಗಿದ್ದಾರೆ. ಪ್ರಸನ್ನ ಅವರ ನೇತೃತ್ವದಲ್ಲಿ ಗ್ರಾಮಸೇವಾ ಸಂಘ ನಡೆಸುತ್ತಿರುವ ಈ ಚಳವಳಿಯಲ್ಲಿ ಪಾಲ್ಗೊಳ್ಳಲೆಂದೇ ಅವರು ಈಚೆಗೆ ಬೆಂಗಳೂರಿಗೆ ಬಂದಿದ್ದರು.

* ನಿಮ್ಮದು ಕುಶಲಕರ್ಮಿಗಳ ಕುಟುಂಬವೇ?
ನಮ್ಮ ದೇಶದ ಬಹುತೇಕ ಮುಸ್ಲಿಂ ಕುಟುಂಬಗಳಲ್ಲಿರುವಂತೆ ನಮ್ಮ ಕುಟುಂಬದಲ್ಲೂ ಕರಕುಶಲಕರ್ಮಿಗಳಿದ್ದಾರೆ. ಬಾಲ್ಯದಿಂದಲೂ ನನಗೆ ಕೈಮಗ್ಗ ಮತ್ತ ಕರಕುಶಲಕಲೆಯ ಬಗ್ಗೆ ಒಲವಿತ್ತು. ನನ್ನ ತಾಯಿಯ ಸರಳ ಜೀವನ ನನ್ನ ಮೇಲೆ ಪ್ರಭಾವ ಬೀರಿತು. ಈಗಲೂ ನಾನು ಕೈಯಿಂದಲೇ ತಯಾರಿಸಿದ ಸಾಬೂನು (ಹ್ಯಾಂಡ್‌ಮೇಡ್ ಸೋಪ್) ಬಳಸುತ್ತೇನೆ. ನಾನು ಬಳಸುವ ಕೋಟ್, ಟೋಪಿ, ಜುಬ್ಬಾ ಎಲ್ಲವೂ ಕೈಮಗ್ಗದಿಂದಲೇ ತಯಾರಾದವು. ಗ್ರಾಮೀಣ ಕುಶಲಕರ್ಮಿಗಳು ತಯಾರಿಸಿದ ಶೋಗಳನ್ನೇ ನಾನು ಖರೀದಿಸುತ್ತೇನೆ. ಇವೆಲ್ಲವೂ ನನ್ನ ಬದುಕಿನ ಸಹಜ ಅಂಶಗಳು.

* ಕೈಮಗ್ಗ ಚಳವಳಿಯನ್ನು ಬೆಂಬಲಿಸುವುದು, ಪಾಲ್ಗೊಳ್ಳುವುದು ಎತ್ತಿನಗಾಡಿಯ ಜಗತ್ತಿಗೆ ಮರಳಿದಂತಲ್ಲವೇ?
ಈ ಮಾತನ್ನು ಅನೇಕರು ಹೇಳಿದ್ದಾರೆ. ಈ ಮಾತು ಕೇಳಿದಾಗಲೆಲ್ಲಾ ನನಗೆ ನಗು ಬರುತ್ತದೆ. ಯಂತ್ರವನ್ನು ಮನುಷ್ಯ ಅಗತ್ಯಕ್ಕೆ ತಕ್ಕಂತೆ ಬಳಸಬೇಕು. ಮಾನವ ಸ‍ಂಪನ್ಮೂಲ ಹೇರಳವಾಗಿರುವ ನಮ್ಮ ದೇಶಕ್ಕೆ ಯಂತ್ರಗಳ ಅವಶ್ಯಕತೆ ಅಷ್ಟಾಗಿ ಇಲ್ಲ. ಈ ಮಾತು ಹೇಳುತ್ತಿದ್ದೇನೆ ಎಂದ ಮಾತ್ರಕ್ಕೆ ನಾನೇನು ತಂತ್ರಜ್ಞಾನ ವಿರೋಧಿಯಲ್ಲ. ಮಾನವ ಸಂಪನ್ಮೂಲಕ್ಕೆ ಧಕ್ಕೆ ತರುವ, ಪರಿಸರಕ್ಕೆ ಮಾರಕವಾಗುವ ತಂತ್ರಜ್ಞಾನವನ್ನು ಮಾತ್ರ ನಾನು ವಿರೋಧಿಸುತ್ತೇನೆ.

* ಕೈಮಗ್ಗ ಮತ್ತು ಕರಕುಶಲಕರ್ಮಿಗಳ ಉಳಿವಿಗಾಗಿ ನಟನಾಗಿ ನೀವೇನು ಮಾಡಿದ್ದೀರಿ?
ನಾನೇನು ಮಾಡಿದ್ದೇನೆ? ನಟನೆ ಅನ್ನುವುದು ನನ್ನ ವೃತ್ತಿ. ಅದರ ಹೊರತಾಗಿ ನಾನು ನಿಮ್ಮಂತೆಯೇ. ನಟನೆಗಾಗಿ ನಾನು ನನ್ನ ಬುದ್ಧಿ, ಕೈ–ಕಾಲುಗಳನ್ನು ಬಳಸುತ್ತೇನೆ. ನಾನೂ ಕೂಡಾ ಕರಕುಶಲಕರ್ಮಿಯೇ. ಈ ಹಿನ್ನೆಲೆಯಲ್ಲಿ ದೇಶದಲ್ಲಿರುವ ಸಾವಿರಾರು ಕರಕುಶಲಕರ್ಮಿಗಳು ನನ್ನ ಸಹೋದರ–ಸಹೋದರಿಯರಿದ್ದಂತೆ. ಕುಶಲಕರ್ಮಿಗಳು ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಬೆಲೆಯನ್ನು ಪಡೆದುಕೊಳ್ಳಬೇಕು. ಅವರ ಅಸ್ತಿತ್ವಕ್ಕಾಗಿ ಅವರೀಗ ಹೋರಾಡಬೇಕಿದೆ. ಅದರಲ್ಲೂ ಈಗ ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳ ಮೇಲೆ ಜಿಎಸ್‌ಟಿ ಹೇರಿರುವುದನ್ನು ನಾನು ಪ್ರಬಲವಾಗಿ ವಿರೋಧಿಸುತ್ತೇನೆ.

ನಟನಾಗಿ ನಾನು ಈ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದೇನೆಂಬ ಕಾರಣಕ್ಕಾಗಿ ನಾನು ಸಾಮಾಜಿಕ ಕಾರ್ಯಕರ್ತನೆಂಬ ಹಣೆಪಟ್ಟಿ ಕಟ್ಟಿಕೊಂಡಿಲ್ಲ. ನನಗೆ ಜನಪ್ರಿಯತೆಯ ಹಂಗಿಲ್ಲ. ಆದರೆ, ನನ್ನಂತೆಯೇ ಇರುವ ಜನಸಾಮಾನ್ಯರೂ, ಪತ್ರಕರ್ತರೂ, ವಿವಿಧ ವೃತ್ತಿಯಲ್ಲಿರುವವರು ಈ ಚಳವಳಿಯಲ್ಲಿ ಪಾಲ್ಗೊಂಡರೆ ಅವರೂ ಸಾಮಾಜಿಕ ಕಾರ್ಯಕರ್ತರೇ.

ಮನುಷ್ಯನಾಗಿ ನಾನು ಜೀವವಿಲ್ಲದ ಕಥೆಯನ್ನು ಒಪ್ಪಿಕೊಳ್ಳಲಾರೆ. ಅಂತೆಯೇ ನನ್ನ ವೈಯಕ್ತಿಕ ಜೀವನದಲ್ಲೂ ನಾನು ಜೀವನ್ಮುಖಿಯಾಗಿ ಬದುಕುತ್ತಿದ್ದೇನೆ. ಅದರ ಭಾಗವಾಗಿಯೇ ಸಹಜವಾಗಿ ಕೈಮಗ್ಗ ನನ್ನ ಜೀವನದಲ್ಲಿದೆ. ಕೆಲ ನಟರು ಸದ್ದಿಲ್ಲದೆ ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿದ್ದಾರೆ. ಅವರು ನೇಪಥ್ಯದಲ್ಲಿದ್ದಾರಷ್ಟೇ. ನಟನಾಗಿ ನನ್ನ ಸಾಮಾಜಿಕ ಜವಾಬ್ದಾರಿಗಳ ಕುರಿತಾಗಿ ನಾನೆಂದೂ ಪ್ರಚಾರ ಬಯಸುವುದಿಲ್ಲ. ಸಾಮಾಜಿಕ ಜವಾಬ್ದಾರಿ ಅನ್ನೋದು ಮನುಷ್ಯತ್ವದಷ್ಟೇ ಸಹಜ ಎಂಬುದು ನನ್ನ ನಂಬಿಕೆ. ಹಾಲಿವುಡ್‌ನಲ್ಲಿ ಎಷ್ಟೋ ಕಲಾವಿದರು ಅನೇಕ ಸಂದರ್ಭಗಳಲ್ಲಿ ಮುಕ್ತವಾಗಿ ದನಿ ಎತ್ತುತ್ತಾರೆ.

* ಸಿನಿಮಾ ಇಂದಿಗೂ ಪ್ರಭಾವಶಾಲಿ ಮಾಧ್ಯಮವಾಗಿ ಉಳಿದಿದೆಯೇ?
70–80ರ ದಶಕದಲ್ಲಿ ಬರುತ್ತಿದ್ದ ಸಿನಿಮಾಗಳಲ್ಲಿ ಸೈದ್ಧಾಂತಿಕ ನೆಲೆ ಇರುತ್ತಿತ್ತು. ಆಗಿನ ಸಿನಿಮಾಗಳು ಸಾಮಾಜಿಕ ಸಂಗತಿಗಳನ್ನು ಕೇಂದ್ರಿಕರಿಸುತ್ತಿದ್ದವು. ಆದರೆ, ಈಗ ಬಾಲಿವುಡ್ ಅಂಥ ಪ್ರಭಾವಶಾಲಿ ಮಾಧ್ಯಮವಾಗಿ ಉಳಿದಿಲ್ಲ. ಪ್ರೇಕ್ಷಕ ಬರೀ ಮನರಂಜನೆಯಷ್ಟನ್ನೇ ಬಯಸುತ್ತಾನೆ ಎಂಬ ಭ್ರಮೆಯಲ್ಲಿ ನಾವಿದ್ದೇವೆ. ಬಾಲಿವುಡ್ ಈಗ ತನ್ನ ಪಥವನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳಬೇಕಿದೆ. ಹಾಗಾಗದಿದ್ದರೆ ಪ್ರೇಕ್ಷಕರು ಹಾಲಿವುಡ್ ಇಲ್ಲವೇ ಪ್ರಾದೇಶಿಕ ಸಿನಿಮಾಗಳಿಗೆ ಮರಳುವ ಕಾಲ ದೂರವಿಲ್ಲ. ನಮ್ಮ ದೇಶದಲ್ಲಿ ಸಿನಿಮಾ ನೋಡುವವರ ಸಂಖ್ಯೆ ಬರೀ ಶೇ 4 ಮಾತ್ರ. ಯಾವುದೋ ಒಂದು ಸಿನಿಮಾ ಹಿಟ್ ಆಗಿದೆ ಅಂದಾಕ್ಷಣ ಅದನ್ನು ಎಲ್ಲರೂ ನೋಡಿರುತ್ತಾರೆ ಎಂಬುದು ಮೂರ್ಖತನವಲ್ಲವೇ?

ಸಾಮಾಜಿಕ ಮಾಧ್ಯಮಗಳು ಸಕ್ರಿಯವಾಗಿರುವ ಕಾಲವಿದು. ಆದರೆ ಅದೂ ಸಹ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿದೆ. ಅಲ್ಲಿರುವ ಜಗತ್ತಿಗೂ ವಾಸ್ತವ ಜಗತ್ತಿಗೂ ವ್ಯತ್ಯಾಸವಿದೆ.

* ಕೈಮಗ್ಗದ ಬಟ್ಟೆಗಳೇಕೆ ನಿಮಗೆ ಇಷ್ಟ?
ಕೈಮಗ್ಗದ ಬಟ್ಟೆಗಳನ್ನು ಧರಿಸುವುದು ಧ್ಯಾನದಂತೆ. ಈ ಬಟ್ಟೆಗಳನ್ನು ಯಾಂತ್ರಿಕವಾಗಿ ತಯಾರಿಸಲಾಗದು. ಕೈಮಗ್ಗ ಮತ್ತು ಕರಕುಶಲದ ಕೆಲಸ ಮಾಡುವಾಗ ದೇಹ ಮತ್ತು ಮನಸು ಎರಡೂ ಅದರಲ್ಲಿ ಧ್ಯಾನಸ್ಥವಾಗಿ ತಲ್ಲೀನವಾಗುತ್ತದೆ. ಅದಕ್ಕಾಗಿಯೇ ಮಹಾತ್ಮ ಗಾಂಧೀಜಿ ಅವರು ಚರಕದಿಂದ ತನ್ಮಯರಾಗಿ ನೂಲು ತೆಗೆಯುತ್ತಿದ್ದರು. ಅವರಿಗೆ ಅದೊಂದು ಭಕ್ತಿಯಾಗಿತ್ತು. ಮತ್ತೀಗ ಅಂಥದ್ದೇ ಭಕ್ತಿ ಚಳವಳಿ ರೂಪುಗೊಳ್ಳಬೇಕಿದೆ. ಏಕೆಂದರೆ ಕೈಮಗ್ಗದೊಂದಿಗೆ ಬದುಕುವುದೆಂದರೆ ಧ್ಯಾನಸ್ಥರಾಗಿ ಬದುಕಿದಂತೆ.

ಪಾಶ್ಚಿಮಾತ್ಯರಲ್ಲಿಯೂ ಗ್ರಾಹಕ ಸಂಸ್ಕೃತಿ ವಾಕರಿಕೆ ತಂದಿದೆ. ಅದಕ್ಕಾಗಿಯೇ ಅವರೀಗ ನಿಸರ್ಗಕ್ಕೆ ಮರಳುತ್ತಿದ್ದಾರೆ. ಕೈಮಗ್ಗದ ಉತ್ಪನ್ನಗಳತ್ತ ಅವರ ಚಿತ್ತ ವಾಲಿದೆ. ಯಾಂತ್ರೀಕರಣದ ಪರಿಣಾಮಕ್ಕೆ ಇದಕ್ಕಿಂತ ಉದಾಹರಣೆ ಬೇಕೇ?

ಪ್ರಸನ್ನ ನನ್ನ ಗುರು...
ಪ್ರಸನ್ನ ಅವರನ್ನು ನನ್ನ ಗುರುಗಳು ಎಂದು ಕರೆಯುತ್ತೇನೆ. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಕ್ಕೆ (ಎನ್‌ಎಸ್‌ಡಿ) ಸೇರಿದಾಗ ಅಲ್ಲಿ ನನಗೆ ನಟನೆ ಕಲಿಸಿಕೊಡಲಾಗುತ್ತದೆ ಎಂದು ನಾನು ತಿಳಿದಿದ್ದೆ. ಅದಕ್ಕಾಗಿ ಒಂದೂವರೆ ವರ್ಷ ಕಷ್ಟಪಟ್ಟೆ. ಪ್ರಸನ್ನ ಅವರಿಗೆ ನನ್ನ ಕಷ್ಟ ಅರ್ಥವಾಗಿ, ನನ್ನೊಳಗಿನ ನಟನನ್ನು ಹೊರ ತೆಗೆಯುವುದು ಹೇಗೆಂದು ಹೇಳಿಕೊಟ್ಟರು. ಸಹಜವಾಗಿ ಅಭಿನಯಿಸುವುದು ಎಂದರೇನು ಎಂಬುದು ನನಗೆ ತಿಳಿಯಿತು. ಆಗಲೇ ನನಗೆ ನಟನೆಯೊಳಗೆ ತಾದಾತ್ಮ್ಯ ಬೆಳೆಯಿತು. ಅದರೊಂದಿಗೆ ಬೆಳೆದ ತಾದಾತ್ಮ್ಯ ಭಾವವೇ ಇಂದಿನ ಚಳವಳಿಗೆ ನನ್ನನ್ನು ಕರೆತಂದಿದೆ.

ಇರ್ಫಾನ್ ಖಾನ್ ಚಿತ್ರ: ಪಿ.ಎಸ್. ಕೃಷ್ಣಕುಮಾರ್
ಇರ್ಫಾನ್ ಖಾನ್ ಚಿತ್ರ: ಪಿ.ಎಸ್. ಕೃಷ್ಣಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT