ನವದೆಹಲಿ: ಸಿಬಿಎಸ್ಇ ಪಠ್ಯಕ್ರಮ ಬೋಧಿಸುವ ಶಾಲೆಗಳಿಗೆ ಇನ್ನು ಮುಂದೆ ಶಾಶ್ವತ ಮಾನ್ಯತೆ ನೀಡದಿರಲು ಕೇಂದ್ರ ಪ್ರೌಢ ಶಿಕ್ಷಣ ಶಿಕ್ಷಣ ಮಂಡಳಿ(ಸಿಬಿಎಸ್ಇ) ನಿರ್ಧರಿಸಿದೆ.
ಶಿಕ್ಷಣ ಸಂಸ್ಥೆಗಳ ಶಾಶ್ವತ ಮಾನ್ಯತೆ ರದ್ದು ಮಾಡಿ, ಅದನ್ನು ತಾತ್ಕಾಲಿಕ ಮಾನ್ಯತೆ ಎಂದು ಪರಿಗಣಿಸಲಾಗುವುದು ಎಂದು ಮಂಡಳಿ ತಿಳಿಸಿದೆ.
ಈ ಸಂಬಂಧ ಬೈಲಾದಲ್ಲಿ ಕೆಲವು ಮಾರ್ಪಾಡು ಮಾಡಿ ಮಂಡಳಿಯು ಜನವರಿ 3ರಂದು ಅಧಿಸೂಚನೆ ಹೊರಡಿಸಿದ್ದು, ನಿರ್ಧಾರದ ಹಿಂದಿರುವ ಕಾರಣವನ್ನು ಮಾತ್ರ ತಿಳಿಸಿಲ್ಲ.
ಶಿಕ್ಷಣ ಸಂಸ್ಥೆಗಳು ಮೂರು ವರ್ಷಗಳಿಗೊಮ್ಮೆ ತಾತ್ಕಾಲಿಕ ಮಾನ್ಯತೆಯನ್ನು ನವೀಕರಿಸಿಕೊಳ್ಳುವಂತೆ ಸೂಚಿಸಿದೆ.
ತಾನು ವಿಧಿಸಿರುವ ಎಲ್ಲ ಷರತ್ತು ಮತ್ತು ನಿಬಂಧನೆ ಪಾಲಿಸುವ ಸಂಸ್ಥೆಗಳ ಮಾನ್ಯತೆಯನ್ನು ಮಾತ್ರ ನವೀಕರಿಸಲಾಗುತ್ತದೆ. ಇಲ್ಲದಿದ್ದರೆ ಮಾನ್ಯತೆ ರದ್ದು ಮಾಡಲಾಗುವುದು ಎಂದು ಹೇಳಿದೆ.
ಶಾಶ್ವತ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ ಮತ್ತು ಶಾಲೆಗಳು ತಕ್ಷಣ ಮಾನ್ಯತೆ ನವೀಕರಣ ಅರ್ಜಿ ಸಲ್ಲಿಸುವಂತೆ ಮಂಡಳಿ ಸೂಚಿಸಿದೆ.
12ನೇ ತರಗತಿ ದೈಹಿಕ ಶಿಕ್ಷಣ ಪರೀಕ್ಷೆ ಮುಂದೂಡಿಕೆ
ಸಿಬಿಎಸ್ಇ ತನ್ನ 12ನೇ ತರಗತಿ ಪರೀಕ್ಷಾ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆ ಮಾಡಿದ್ದು, ಒಂದು ವಿಷಯದ ಪರೀಕ್ಷೆಯನ್ನು ಮುಂದೂಡಿದೆ.
ಏಪ್ರಿಲ್ 9ರಂದು ನಡೆಯಬೇಕಿದ್ದ ದೈಹಿಕ ಶಿಕ್ಷಣ ಪರೀಕ್ಷೆಯನ್ನು ಏಪ್ರಿಲ್ 13ಕ್ಕೆ ಮುಂದೂಡಲಾಗಿದೆ. ಅಂದು ಬೆಳಿಗ್ಗೆ 10.30 ಗಂಟೆಗೆ ಪರೀಕ್ಷೆ ಆರಂಭ
ವಾಗಲಿದೆ. ಇನ್ನುಳಿದ ವಿಷಯಗಳ ಪರೀಕ್ಷೆ ಈ ಮೊದಲೇ ನಿಗದಿ ಪಡಿಸಿದ ವೇಳಾಪಟ್ಟಿಯಂತೆ ನಡೆಯಲಿವೆ.
ಆಡಳಿತಾತ್ಮಕ ಕಾರಣಗಳಿಗಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ಸಿಬಿಎಸ್ಇ ತಿಳಿಸಿದೆ.