ಚೆನ್ನೈ: ತಮಿಳುನಾಡಿನ ರಾಮನಾಥಪುರದಲ್ಲಿ ಫೆಬ್ರುವರಿ 21ರಂದು ತಮ್ಮ ರಾಜಕೀಯ ಪಕ್ಷದ ಹೆಸರು ಘೋಷಣೆ ಮಾಡಲಿರುವ ನಟ ಕಮಲ್ ಹಾಸನ್, ಅಂದೇ ರಾಜ್ಯವ್ಯಾಪಿ ಪ್ರವಾಸವನ್ನೂ ಆರಂಭಿಸಲಿದ್ದಾರೆ.
ತಮ್ಮ ಊರಾದ ರಾಮನಾಥಪುರದಿಂದ ಪ್ರವಾಸ ಪ್ರಾರಂಭಿಸಲಿರುವ ಕಮಲ್ ಮದುರೆ, ದಿಂಡಿಗಲ್, ಸಿವಗಂಗೈ ಜಿಲ್ಲೆಗಳಲ್ಲಿ ಜನರನ್ನು ಭೇಟಿಯಾಗಲಿದ್ದಾರೆ.
‘ಪ್ರವಾಸದ ಆರಂಭದಲ್ಲಿ ಪಕ್ಷದ ಹೆಸರು ಮತ್ತು ನಾವು ನಡೆಯಬೇಕಿರುವ ಮಾರ್ಗಸೂಚಿಯನ್ನು ಘೋಷಿಸುವ ಉದ್ದೇಶವಿದೆ. ಜನರ ಅಗತ್ಯಗಳೇನು, ಏನೆಲ್ಲ ಸಮಸ್ಯೆಗಳು ಅವರನ್ನು ಬಾಧಿಸುತ್ತಿವೆ ಎಂದು ತಿಳಿಯಲು ಈ ಪ್ರವಾಸ ಅಗತ್ಯ’ ಎಂದು ಕಮಲ್ ತಿಳಿಸಿದ್ದಾರೆ.
‘ತಮಿಳುನಾಡು ರಾಜಕೀಯಕ್ಕೆ ಕೆಲ ಸಮಯದಿಂದ ಹಿಡಿದಿರುವ ಪಿಡುಗನ್ನು ನಾವು ಎದುರಿಸಬೇಕಿದೆ. ಈ ಉದ್ದೇಶ ಪೂರೈಸಲು ನನ್ನ ಚಿಂತನೆಗಳಿಗೆ ಜನರ ಬೆಂಬಲವೂ ಬೇಕು. ರಾಜ್ಯದಲ್ಲಿನ ಆಡಳಿತ ಮತ್ತು ಅಭಿವೃದ್ಧಿ ಕುರಿತು ಜನರು ಪ್ರಶ್ನೆಗಳನ್ನು ಎತ್ತಬೇಕು’ ಎಂದು ಅವರು ಹೇಳಿದ್ದಾರೆ.
‘ನಿಮ್ಮ ಬೆಂಬಲದೊಂದಿಗೆ ಈ ಪ್ರವಾಸ ಆರಂಭಿಸುತ್ತಿದ್ದೇನೆ. ದೇಶ ಮತ್ತು ರಾಜ್ಯವನ್ನು ಸಶಕ್ತಗೊಳಿಸಲು ನನ್ನೊಂದಿಗೆ ಕೈ ಜೋಡಿಸಿ. ಸದ್ಯದಲ್ಲೇ ನಿಮ್ಮನ್ನು ಕಾಣುತ್ತೇನೆ’ ಎಂದು ಜನರನ್ನುದ್ದೇಶಿಸಿ ಅವರು ಹೇಳಿದ್ದಾರೆ.