ಬೆಂಗಳೂರು: ಕನ್ನಡ ಪ್ರತ್ಯೇಕ ಧ್ವಜಕ್ಕೆ ನಾಲ್ಕು ಮಾದರಿ ವಿನ್ಯಾಸಗಳನ್ನು ರೂಪಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು, ಇದರಲ್ಲಿ ಒಂದನ್ನು ಆಯ್ಕೆ ಮಾಡಲು ತಜ್ಞರ ಸಮಿತಿಗೆ ಒಪ್ಪಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಚಕ್ರವರ್ತಿ ಮೋಹನ್ ಅಧ್ಯಕ್ಷತೆಯಲ್ಲಿ ಬುಧವಾರ ಮೂರನೇ ಸಭೆ ನಡೆಯಿತು.
ಈಗಿರುವ ಕೆಂಪು ಮತ್ತು ಹಳದಿ ಧ್ವಜ, ಲಾಂಛನ ಇರುವ ಪ್ರತ್ಯೇಕ ಧ್ವಜ ಸೇರಿ ನಾಲ್ಕು ಮಾದರಿಗಳನ್ನು ಅಧಿಕಾರಿಗಳು ರೂಪಿಸಿದ್ದಾರೆ. ಇವುಗಳನ್ನು ಪರಿಶೀಲಿಸಿದ ಸಮಿತಿ ಸದಸ್ಯರು, ಇದೇ 22ರಂದು ನಡೆಯಲಿರುವ ನಾಲ್ಕನೇ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದ್ದಾರೆ.
ಕಾನೂನು ಇಲಾಖೆ ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಅಧಿಕಾರಿಗಳು ಸಮಿತಿಯ ಮುಂದೆ ಕಾನೂನಿನ ಅಂಶಗಳ ಬಗ್ಗೆ ವಿವರಣೆ ನೀಡಿದ್ದಾರೆ. ಕೇಂದ್ರದ ಅನುಮತಿ ಪಡೆಯುವುದನ್ನು ಬಿಟ್ಟರೆ ಬೇರೆ ತೊಡಕಿಲ್ಲ. ಹೀಗಾಗಿ, ವಿನ್ಯಾಸ ಅಂತಿಮಗೊಳಿಸಿ ಸರ್ಕಾರಕ್ಕೆ ವರದಿ ನೀಡಲು ತೀರ್ಮಾನಿಸಲಾಗಿದೆ ಎಂದು ಸಮಿತಿಯ ಮೂಲಗಳು ತಿಳಿಸಿವೆ.
ಬಹುತೇಕ ಮುಂದಿನ ಸಭೆಯಲ್ಲಿ ವಿನ್ಯಾಸ ಅಂತಿಮವಾಗಲಿದ್ದು, ಫೆಬ್ರುವರಿಯಲ್ಲಿ ಸರ್ಕಾರಕ್ಕೆ ವರದಿ ನೀಡುವ ಸಾಧ್ಯತೆ ಇದೆ ಎಂದೂ ಮೂಲಗಳು ಹೇಳಿವೆ.