ಹರಿಹರ: ತಾಲ್ಲೂಕಿನ ಬುಳ್ಳಾಪುರ ಗ್ರಾಮದ ಗೋಮಾಳ ಜಮೀನಿನಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ತೆರವುಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಆಡಳಿತ ಹಾಗೂ ಗ್ರಾಮಸ್ಥರ ಮಧ್ಯೆ ಬುಧವಾರ ವಾಗ್ವಾದ ನಡೆಯಿತು. ಮನೆ ಮಾಲೀಕರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರಿಂದ ತಾಲ್ಲೂಕು ಆಡಳಿತವು ಮನೆಗಳ ತೆರವಿಗೆ ನಾಲ್ಕು ದಿನಗಳ ಕಾಲಾವಕಾಶ ನೀಡಿತು.
ಗ್ರಾಮದಲ್ಲಿರುವ ಗೋಮಾಳ ಜಮೀನನ್ನು ಕೆಲವರು ಅಕ್ರಮಿಸಿಕೊ ಳ್ಳುತ್ತಿದ್ದಾರೆ. ಅಂಥವರಿಗೆ ಅಧಿಕಾರಿಗಳು, ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ನೀಡುತ್ತಾರೆ ಎಂದು ಗ್ರಾಮಸ್ಥ ಪ್ರದೀಪ್ ದೂರಿದರು.
2011ರಿಂದ ಗ್ರಾಮ ಪಂಚಾಯ್ತಿ ಯಲ್ಲಿ ಕಂದಾಯ ಕಟ್ಟುತ್ತಿದ್ದೇವೆ. ಮನೆ ನಿರ್ಮಿಸಿಕೊಡಲು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಹೀಗಾಗಿ ನಿವಾಸಿಗಳು ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಗ್ರಾಮಸ್ಥ ಹನುಮಂತಪ್ಪ ಹೇಳಿದರು.
ಗ್ರೇಡ್-2 ತಹಶೀಲ್ದಾರ್ ವೆಂಕಟಮ್ಮ ಮಾತನಾಡಿ, ‘ಗ್ರಾಮ ವ್ಯಾಪ್ತಿಯ 21 ಎಕರೆ ಗೋಮಾಳ ಜಮೀನಿನಲ್ಲಿ 10 ಎಕರೆ ತೋಟಗಾರಿಕೆ ಇಲಾಖೆ, 2 ಎಕರೆ ಆಶ್ರಯ ಕಾಲೊನಿ ಹಾಗೂ ಶಾಲೆಗೆ ನೀಡಲಾಗಿದೆ. ಗ್ರಾಮದ ಜೌಗು ಪ್ರದೇಶದ ನಿವಾಸಿಗಳು, ಉಳಿದ ಜಮೀನಿನಲ್ಲಿ 90ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು. ಜಿಲ್ಲಾಧಿಕಾರಿ ಆದೇಶದನ್ವಯ ತೆರವು ಕಾರ್ಯ ನಡೆಸಿದ್ದೇವೆ’ ಎಂದರು.