ನವದೆಹಲಿ: ನಮ್ಮ ಒಬ್ಬ ಯೋಧ ಹುತಾತ್ಮರಾದರೆ, ಪಾಕಿಸ್ತಾನದ 10 ಯೋಧರು ಸಾವಿಗೀಡಾಗಲೇಬೇಕು. ನಾನು ಅವರ ಬದುಕನ್ನು ಈ ರೀತಿ ಕಾಣಲು ಇಷ್ಟಪಡುತ್ತೇನೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪಾಕ್ ಸೇನೆ ವಿರುದ್ಧ ಕೆಂಡಮಂಡಲರಾಗಿದ್ದಾರೆ.
ಕೆಲವು ದಿನಗಳಿಂದ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್ ಸೇನೆಯ ವರ್ತನೆಯನ್ನು ಖಂಡಿಸಿ ಅಮರೀಂದರ್ ಸಿಂಗ್ ಈ ರೀತಿ ಹೇಳಿಕೆ ನೀಡಿದ್ದು, ಭಾರತೀಯ ಸೇನೆ ಪಾಕ್ ಸೇನೆಗೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಲೇಬೇಕು ಎಂದು ಸಲಹೆ ನೀಡಿದ್ದಾರೆ.
ಸಿಂಗ್ ಅವರು ಭದ್ರತಾ ಪಡೆಯಲ್ಲಿ ಕೆಲವು ಕಾಲ ಕಾರ್ಯನಿರ್ವಹಿಸಿದ್ದರು. ಅಲ್ಲದೇ 1965ರಲ್ಲಿ ನಡೆದ ಇಂಡೋ–ಪಾಕ್ ಯುದ್ಧದಲ್ಲಿ ಭಾರತೀಯ ಸೇನೆಯ ನಾಯಕರಾಗಿದ್ದರು.
ಜಮ್ಮುಕಾಶ್ಮೀರದ ಸಾಂಬಾ ಜಿಲ್ಲೆಯ ಗಡಿಯಲ್ಲಿ ಗುರುವಾರ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿದ್ದು, ನಾಗರಿಕರು ಮತ್ತು ಭಾರತೀಯ ಯೋಧರ ಮೇಲೆ ಶೆಲ್ ದಾಳಿ ನಡೆಸಿದೆ. ಈ ವೇಳೆ ಒಬ್ಬ ಬಿಎಸ್ಎಫ್ ಯೋಧ ಹುತಾತ್ಮರಾಗಿದ್ದಾರೆ.