ವಿಜಯಪುರ: ‘ಚಿಕ್ಕಮಗಳೂರು, ಶೃಂಗೇರಿ, ವಿಜಯಪುರ, ಹುಬ್ಬಳ್ಳಿ ಸೇರಿದಂತೆ ರಾಜ್ಯದ 50 ಕ್ಷೇತ್ರಗಳಲ್ಲಿ ಶಿವಸೇನೆ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ’ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.
‘ನಾಲ್ಕು ಕ್ಷೇತ್ರಗಳಿಂದ ನಾನು ಕಣಕ್ಕಿಳಿಯಬೇಕು ಎಂಬುದು ಕಾರ್ಯಕರ್ತರ ಒತ್ತಾಯವಾಗಿದೆ. ಆದರೆ ಈವರೆಗೂ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ನಿರ್ಧರಿಸಿಲ್ಲ. ನಾವೂ ಯಾರನ್ನೂ ಸೋಲಿಸುವುದಕ್ಕಾಗಲಿ, ಗೆಲ್ಲಿಸುವುದಕ್ಕಾಗಲಿ ಸ್ಪರ್ಧಿಸುತ್ತಿಲ್ಲ. ಪ್ರಖರ ಹಿಂದುತ್ವವನ್ನು ಪ್ರತಿಪಾದಿಸು ವುದಕ್ಕಾಗಿ ಶಿವಸೇನೆಯನ್ನು ರಾಜ್ಯಕ್ಕೆ ತರುತ್ತಿದ್ದೇವೆ’ ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘2005ರಲ್ಲಿಯೇ ಶಿವಸೇನೆಯನ್ನು ರಾಜ್ಯಕ್ಕೆ ತರುವ ಪ್ರಯತ್ನ ಮಾಡಿದ್ದೆ. ಆದರೆ ಆಗ ಕನ್ನಡ-ಮರಾಠಿ ವಿಷಯವಾಗಿ ನಡೆದ ಸಂಘರ್ಷದಿಂದಾಗಿ ನಮ್ಮ ಪ್ರಯತ್ನ ವಿಫಲವಾಯಿತು. ಈಗಲೂ ಕೆಲವು ಕನ್ನಡಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಬಹುದು. ಆದರೆ ನಾವು ಅವರಿಗೆ ಮನವರಿಕೆ ಮಾಡಿಕೊಡುತ್ತೇವೆ. ಶಿವಸೇನೆಯಿಂದ ಯಾವತ್ತೂ ಕನ್ನಡಕ್ಕೆ ದ್ರೋಹವಾಗಲಾರದು’ ಎಂದರು.
‘ಮಹಾರಾಷ್ಟ್ರದಲ್ಲಿ ಶಿವಸೇನೆ ಮರಾಠಿ ಭಾಷೆಯ ಅಸ್ಮಿತೆಗಾಗಿ ಹೋರಾಡುತ್ತದೆ, ಅದೇ ರೀತಿಯಲ್ಲಿ ಕರ್ನಾಟಕದ ಶಿವಸೇನೆ ಕನ್ನಡ ನಾಡು, ನುಡಿ ರಕ್ಷಣೆಗಾಗಿ ಹೋರಾಡುತ್ತದೆ. ಬೆಳಗಾವಿ ವಿಷಯದಲ್ಲಿ ಶಿವಸೇನೆಯಿಂದ ರಾಜ್ಯಕ್ಕೆ ಎಂದಿಗೂ ಅನ್ಯಾಯವಾಗಿಲ್ಲ’ ಎಂದು ಹೇಳಿದರು.