ಕಲಬುರ್ಗಿ: ‘ಮನುವಾದಿಗಳಿಂದ ಅಭಿವೃದ್ಧಿಯ ಪಾಠ ಕಲಿಯಬೇಕಾಗಿಲ್ಲ. ಇನ್ನೊಬ್ಬರ ಬಗ್ಗೆ ಮಾತನಾಡುವ ಮುನ್ನ ತಮ್ಮ ಯೋಗ್ಯತೆ ಏನೆಂಬುದನ್ನು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ತಿಳಿದುಕೊಳ್ಳಲಿ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದರು.
’ಹೈದರಾಬಾದ್ ಕರ್ನಾಟಕದ ರಾಜಕಾರಣಿಗಳು ನಾಲಾಯಕ್’ ಎಂಬ ಹೇಳಿಕೆಗೆ ಗುರುವಾರ ಪ್ರತಿಕ್ರಿಯೆ ನೀಡಿದ ಅವರು, ‘ಅನಂತಕುಮಾರ ಸಂಸ್ಕಾರ ಇಲ್ಲದವರಂತೆ ಮಾತನಾಡುತ್ತಿದ್ದಾರೆ. ಶಿಸ್ತಿನ ಪಕ್ಷದ ನಾಯಕನಿಂದ ಇಂಥ ಟೀಕೆ ವ್ಯಕ್ತವಾಗಿರುವುದು ದುರಂತ. ನಮ್ಮ ಭಾಗದ ಸಂಸ್ಕೃತಿ ನೋಡಿ ಅವರು ಕಲಿಯಬೇಕು’ ಎಂದರು.
‘ಅವರು ಕೇಂದ್ರ ಸಚಿವರಾದ ಮೇಲೆ ರಾಜ್ಯದಲ್ಲಿ ಒಂದೇ ಒಂದು ಕೌಶಲ ಅಭಿವೃದ್ಧಿ ಕೇಂದ್ರ ತೆರೆದಿಲ್ಲ. ಇದಕ್ಕಾಗಿ ಮೀಸಲಿಟ್ಟ ಅನುದಾನವನ್ನೂ ಬಳಸಿಕೊಳ್ಳುತ್ತಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ವಾಗ್ದಾನವನ್ನೂ ಬಿಜೆಪಿ ಈಡೇರಿಸಿಲ್ಲ’ ಎಂದು ದೂರಿದರು.
’ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ಬಿಜೆಪಿ ಕೊಡುಗೆ ಶೂನ್ಯ. 371(ಜೆ) ತಿದ್ದುಪಡಿಗೆ ಅವರು ವಿರೋಧ ವ್ಯಕ್ತಪಡಿಸಿದ್ದರು. ಈ ಭಾಗದ ಅಭಿವೃದ್ಧಿಗೆ ಬಿಜೆಪಿಯವರೇ ಅಡ್ಡಿಯಾಗಿದ್ದರು’ ಎಂದು ಅವರು ಆಪಾದಿಸಿದರು.