ಬ್ಯಾಡಗಿ: ಗೋವಾ ಸರ್ಕಾರದ ಜಲ ಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ್ ‘ಕನ್ನಡಿಗರು ಹರಾಮಿಗಳು’ ಎಂದು ನೀಡಿರುವ ಹೇಳಿಕೆಯನ್ನು ಖಂಡಿಸಿ, ಕರ್ನಾಟಕ ವೀರ ಕನ್ನಡಿಗರ ರಕ್ಷಣಾ ವೇದಿಕೆ ಹಾಗೂ ಇತರೇ ಕನ್ನಡಪರ ಸಂಘಟನೆಗಳು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದವು.
ನೇತೃತ್ವವ ವಹಿಸಿದ್ದ ಸಂಘಟನೆಯ ಅಧ್ಯಕ್ಷ ಚನ್ನಬಸಪ್ಪ ಶೆಟ್ಟರ ಮಾತನಾಡಿ, ‘ಕನ್ನಡಿಗರನ್ನು ಅವಮಾನಿಸಿದ ಸಚಿವ ವಿನೋದ ಪಾಲ್ಯೇಕರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ, ರಾಜ್ಯವನ್ನು ಪ್ರವೇಶಿಸದಂತೆ ನಿಷೇಧ ಹೇರಬೇಕು’ ಎಂದು ಒತ್ತಾಯಿಸಿದರು.
ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕು ಕಣಕುಂಬಿ ಬಳಿಯ ಕಳಸಾ ನಾಲಾ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಪಾಲ್ಯೇಕರ್, ಕರ್ನಾಟಕ ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಕನ್ನಡಿಗರು ಹರಾಮಿಗಳು ಎಂದು ಹೇಳಿದ್ದಾರೆ.
ಸಚಿವ ವಿನೋದ ಪಾಲ್ಯೇಕರ್ ಕನ್ನಡಿಗರನ್ನು ತಕ್ಷಣವೇ ಕ್ಷಮೆ ಕೇಳಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಘೋಷಣೆ ಕೂಗಿದರು. ಮಲ್ಲೇಶಪ್ಪ ದೇವರಗುಡ್ಡ, ಎಸ್.ಸಿ.ಮಾದಾಪುರಮಠ, ನಾಗರಾಜ ಬಾರ್ಕಿ, ಸಿದ್ದಲಿಂಗಪ್ಪ ಪಟ್ಟಣಶೆಟ್ಟಿ ವೀರಭದ್ರಪ್ಪ ಮೂಡೇರ ಇದ್ದರು.