ಅರಸೀಕೆರೆ: ಗೌರವಧನ ಬೇಡ, ಸಂಬಳ ಬೇಕು ಎಂದು ಆಗ್ರಹಿಸಿ ತಾಲ್ಲೂಕು ಅಂಗನವಾಡಿಗಳ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಎಐಟಿಯುಸಿ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಉಪತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರವಾಸಿ ಮಂದಿರದ ಆವರಣದಲ್ಲಿ ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಡೋಂಗ್ರೆ, ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಕೆ.ನೇತ್ರಾವತಿ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ರಾಷ್ಟ್ರೀಯ ಹೆದ್ದಾರಿ ಮೂಲಕ ಮೆರವಣಿಗೆಯಲ್ಲಿ ಸಾಗಿ ತಾಲ್ಲೂಕು ಕಚೇರಿ ತಲುಪಿ ಧರಣಿ ಕುಳಿತರು.
ಡೋಂಗ್ರೆ ಮಾತನಾಡಿ, ಸರ್ಕಾರದ ಜೀತದಾಳುಗಳಂತೆ ಬದುಕುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಬದುಕಿನಲ್ಲಿ ಹಾಸುಹೊಕ್ಕಾಗಿದ್ದಾರೆ. ಅವರ ಕೆಲಸಕ್ಕೆ ತಕ್ಕಂತೆ ಸಂಬಳ ನೀಡುತ್ತಿಲ್ಲ. 40 ವರ್ಷದಿಂದ ಹೋರಾಟ ನಡೆಸುತ್ತಿದ್ದರೂ ಯಾವುದೇ ಫಲ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೇತ್ರಾವತಿ ಮಾತನಾಡಿ, ಜ.20ರಿಂದ ಮಾತೃಪೂರ್ಣ ಯೋಜನೆಯ ಅಡುಗೆ ಮಾಡುವುದನ್ನು ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸ್ಥಗಿತಗೊಳಿಸಲಿದ್ದಾರೆ. ಕಾರ್ಯಕರ್ತೆಯರನ್ನು ‘ಸಿ’ ಗ್ರೂಪ್ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಸಂಘದ ಕಾರ್ಯದರ್ಶಿ ಜಯಮ್ಮ, ಮುಖಂಡರಾದ ಬಿ.ರತ್ನಮ್ಮ, ಸಿ.ಎಚ್.ಶಾಂತಮ್ಮ, ಗೌರಮ್ಮ, ವಿ.ಎಚ್.ಲತಾಮಣಿ, ಗಾಯತ್ರಿ, ದ್ರಾಕ್ಷಾಯಣಮ್ಮ, ಪ್ರೇಮಾ ಪಾಲ್ಗೊಂಡಿದ್ದರು.