ದಾವಣಗೆರೆ: ಸಿಪಿಐ ರಾಜ್ಯ ಮಂಡಳಿಯಿಂದ ಜ.27 ರಿಂದ 30ರವರೆಗೆ ದಾವಣಗೆರೆಯಲ್ಲಿ ಸಿಪಿಐ ಪಕ್ಷದ 23ನೇ ರಾಜ್ಯ ಸಮ್ಮೇಳನ ನಡೆಯಲಿದ್ದು, ಇದರ ಪ್ರಯುಕ್ತ ಇಪ್ಟಾ ತಂಡದಿಂದ ಹಮ್ಮಿಕೊಂಡಿರುವ ಜೀಪ್ ಜಾಗೃತಿ ಜಾಥಾಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ನಗರದ ಜಯದೇವ ವೃತ್ತದ ಬಳಿ ಹಮ್ಮಿಕೊಂಡಿದ್ದ ಜೀಪ್ ಜಾಥಕ್ಕೆ, ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಡಾ.ಸಿದ್ದನಗೌಡ ಪಾಟೀಲ್, ತಮಟೆ ಬಾರಿಸಿ ಚಾಲನೆ ನೀಡಿದರು.
ದೇಶದಲ್ಲಿ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿವೆ. ಬಡತನ, ನಿರುದ್ಯೋಗ ಹೆಚ್ಚಿದೆ. ರೈತರ, ಅಸಂಘಟಿತ ಕಾರ್ಮಿಕರ ಸಮಸ್ಯೆ ವ್ಯಾಪಕವಾಗುತ್ತಿವೆ. ಕೇಂದ್ರ ಸರ್ಕಾರವು ಬಂಡವಾಳಶಾಹಿಗಳಿಗೆ ಅನುಕೂಲ ಆಗುವಂತಹ ಕಾನೂನುಗಳನ್ನು ರೂಪಿಸಿ ಕಾರ್ಮಿಕರನ್ನು ವಂಚಿಸುತ್ತಿದೆ ಎಂದರು.
ಸುದ್ದಿಗೋಷ್ಠಿ: ಸಿದ್ದನಗೌಡ ಪಾಟೀಲ್, ದಾವಣಗೆರೆಯ ಮಹಾನಗರ ಪಾಲಿಕೆ ಆವರಣದಲ್ಲಿ ಜ.27ರಂದು ಬೆಳಿಗ್ಗೆ 11ಕ್ಕೆ ಸಮ್ಮೇಳನದ ಬಹಿರಂಗ ಸಭೆ ನಡೆಯಲಿದೆ. ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಉದ್ಘಾಟಿಸುವರು. ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಸೈಯದ್ ಅಜೀಜ್ ಪಾಷಾ ಭಾಗವಹಿಸುವರು ಎಂದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಕೆ.ರಾಮಚಂದ್ರಪ್ಪ ಮಾತನಾಡಿ, ‘ಜಾಗೃತಿ ವಾಹನದ ಜಾಥಾವು ಜ.20 ಜಗಳೂರು. 21ಕ್ಕೆ ಹರಪನಹಳ್ಳಿ. 22ಕ್ಕೆ ಹರಿಹರ. 23ಕ್ಕೆ ಚನ್ನಗಿರಿ. 24ಕ್ಕೆ ದಾವಣಗೆರೆ. 25ಕ್ಕೆ ಹೊನ್ನಾಳಿ ಸೇರಿ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಸಂಚರಿಸಲಿದೆ’ ಎಂದರು.
ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ್, ಎಚ್.ಜಿ.ಉಮೇಶ್, ಆವರಗೆರೆ ಚಂದ್ರು, ಆವರಗೆರೆ ವಾಸು, ಷಣ್ಮುಖಸ್ವಾಮಿ, ಕೊಟ್ರೇಶ್, ಮಲ್ಲಮ್ಮ, ಸರೋಜಮ್ಮ ಅವರೂ ಪತ್ರಿಕಾಗೋಷ್ಠಿಯಲ್ಲಿ ಇದ್ದರು.