ಪುದುಚೇರಿ: ಲಾಭದಾಯಕ ಹುದ್ದೆ ಹೊಂದಿದ ಆಡಳಿತಾರೂಢ ಕಾಂಗ್ರೆಸ್ ಮತ್ತು ಡಿಎಂಕೆ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲು ವಿರೋಧ ಪಕ್ಷ ಎಐಎಡಿಎಂಕೆ ಶನಿವಾರ ನಿರ್ಧರಿಸಿದೆ.
ಆಮ್ ಆದ್ಮಿ ಪಕ್ಷದ 20 ಶಾಸಕರ ಅನರ್ಹತೆಗೆ ಚುನಾವಣಾ ಆಯೋಗ ಶಿಫಾರಸು ಮಾಡಿದ ಬೆನ್ನಲ್ಲೇ ಎಐಎಡಿಎಂಕೆ ಈ ನಿರ್ಧಾರ ತೆಗೆದುಕೊಂಡಿದೆ.
ಲಾಭದಾಯಕ ಹುದ್ದೆಗಳಿಗೆ ರಾಜೀನಾಮೆ ನೀಡುವಂತೆ ಎರಡೂ ಪಕ್ಷಗಳ ಶಾಸಕರಿಗೆ ಎಐಎಡಿಎಂಕೆ 15 ದಿನಗಳ ಗಡುವು ನೀಡಿದೆ. ಇಲ್ಲದಿದ್ದರೆ ಆಯೋಗಕ್ಕೆ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಿದೆ.