ನವದೆಹಲಿ: ಎಎಪಿಯ 20 ಶಾಸಕರ ಅನರ್ಹತೆಗೆ ನಾಂದಿ ಹಾಡಿದ್ದೇ 31ರ ಹರೆಯದ ಯುವ ವಕೀಲ ಪ್ರಶಾಂತ್ ಪಟೇಲ್ ಮತ್ತು ಅವರು 2015ರಲ್ಲಿ ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಬರೆದಿದ್ದ ನಾಲ್ಕು ಪುಟಗಳ ಪತ್ರ.
ಉತ್ತರಪ್ರದೇಶದ ಫತೇಪುರದವರಾದ ಪ್ರಶಾಂತ್ ಸುಪ್ರೀಂ ಕೋರ್ಟ್ನಲ್ಲಿ ವಕೀಲರಾಗಿದ್ದಾರೆ. ‘ನಾನು ಯಾವ ಪಕ್ಷದವನೂ ಅಲ್ಲ. ಸಾಮಾಜಿಕ ಹೋರಾಟಗಾರ’ ಎಂದು ಪ್ರಶಾಂತ್ ತಮ್ಮ ಅಧಿಕೃತ ಜಾಲತಾಣ ಮತ್ತು ಟ್ವಿಟರ್ ಖಾತೆಯಲ್ಲಿ ಪರಿಚಯಿಸಿಕೊಂಡಿದ್ದಾರೆ.
ಪ್ರಶಾಂತ್ ಪಟೇಲ್ ಹೆಸರು ಮೊದಲು ಮಾಧ್ಯಮಗಳಲ್ಲಿ ಬಂದ್ದದೇ ಅಮಿರ್ ಖಾನ್ ಅಭಿನಯದ ‘ಪಿಕೆ’ ಚಿತ್ರ ವಿವಾದ ತಲೆದೋರಿದಾಗ. ‘ಪಿಕೆ ಚಿತ್ರದಲ್ಲಿ ಹಿಂದೂ ದೇವತೆಗಳ ಅವಹೇಳನ ಮಾಡಲಾಗಿದೆ. ಇದು ಹಿಂದೂ ವಿರೋಧಿ ಚಿತ್ರ’ ಎಂದು ಅವರು ದೆಹಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು.
‘ಚುನಾವಣಾ ಆಯೋಗದ ಈ ಶಿಫಾರಸು ಸಾಂವಿಧಾನಿಕ ಸಂಸ್ಥೆಗಳಲ್ಲಿ ಜನರಿಗೆ ಮತ್ತೆ ವಿಶ್ವಾಸ ಮೂಡಿಸಲಿದೆ. ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವ ರಾಜಕಾರಣಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದ ಸಂದೇಶ ಈಗ ರವಾನೆಯಾಗಿದೆ’ ಎಂದು ಪ್ರಶಾಂತ್ ಪ್ರತಿಕ್ರಿಯಿಸಿದ್ದಾರೆ.