ಗುವಾಹಟಿ: ಇಲ್ಲಿನ ನಿಲ್ದಾಣದಲ್ಲಿ ವಿಮಾನ ಭೂಸ್ಪರ್ಶ ಮಾಡುವ ವೇಳೆ ಹಕ್ಕಿಯೊಂದು ಬಡಿದದ್ದರಿಂದ ಆಗಬಹುದಾಗಿದ್ದ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಮಣಿಪುರ ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ಸೇರಿದಂತೆ 160 ಪ್ರಯಾಣಿಕರು ಇದರಲ್ಲಿದ್ದರು.
ದೆಹಲಿ–ಗುವಾಹಟಿ–ಇಂಫಾಲ ಮಾರ್ಗದ ವಿಮಾನ ಶುಕ್ರವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿತು. ಸುರಕ್ಷತಾ ಪರಿಶೀಲನೆಗೆಂದು ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಶನಿವಾರ ಮಧ್ಯಾಹ್ನ ಪ್ರಯಾಣಿಕರಿಗೆ ಮತ್ತೊಂದು ವಿಮಾನದ ವ್ಯವಸ್ಥೆ ಮಾಡಲಾಯಿತು.
‘ನಾವು ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆಯಿತು. ಆದರೆ ವಿಮಾನವು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು’ ಎಂದು ಬಿರೆನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
‘ಗುವಾಹಟಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾದ ವ್ಯವಸ್ಥೆ ಕಳಪೆಯಾಗಿದೆ’ ಎಂದು ಅವರು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ವಿಮಾನಯಾನ ಸಂಸ್ಥೆಯ ವಕ್ತಾರ, ‘ಪ್ರಯಾಣಿಕರ ಸುರಕ್ಷೆ ಹಾಗೂ ಸೌಲಭ್ಯಕ್ಕಾಗಿ ನಾವು ಅತ್ಯುತ್ತಮ ಸೇವೆ ಒದಗಿಸಿದ್ದೇವೆ’ ಎಂದಿದ್ದಾರೆ.