ಜಮ್ಮು: ಇಲ್ಲಿನ ಅಂತರರಾಷ್ಟ್ರೀಯ ಗಡಿ (ಐಬಿ) ಹಾಗೂ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಪಾಕಿಸ್ತಾನ ಸೇನೆಯ ಗುಂಡಿನ ದಾಳಿಗೆ ಒಬ್ಬ ಯೋಧ ಸೇರಿ ಮೂವರು ಬಲಿಯಾಗಿದ್ದು ಆರು ಜನ ಗಾಯಗೊಂಡಿದ್ದಾರೆ.
ಸತತ ಮೂರನೇ ದಿನವಾದ ಶನಿವಾರವೂ ಪಾಕಿಸ್ತಾನ ಕದನವಿರಾಮ ಉಲ್ಲಂಘಿಸಿದೆ. ಮೂರು ದಿನಗಳಿಂದ ಪಾಕ್ ದಾಳಿಗೆ ಒಟ್ಟು 9 ಮಂದಿ ಸಾವನ್ನಪ್ಪಿದ್ದಾರೆ.
ಪಾಕಿಸ್ತಾನ ಶನಿವಾರ ನಡೆಸಿದ ಗುಂಡಿನ ದಾಳಿಯಲ್ಲಿ ಯೋಧ ಮಂದೀಪ್ ಸಿಂಗ್ (23) ಅವರು ಸಾವನ್ನಪ್ಪಿದ್ದಾರೆ ಎಂದು ವಕ್ತಾರರೊಬ್ಬರು ತಿಳಿಸಿದ್ದಾರೆ. ಗೌರಾ ರಾಮ್ (17) ಮತ್ತು ಗೌರ್ ಸಿಂಗ್ (45) ಅವರು ಸಾವನ್ನಪ್ಪಿದ ನಾಗರಿಕರು. ಈವರೆಗೆ ಸುಮಾರು 9,000 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಮೂರು ದಿನ ಶಾಲೆಗಳು ಬಂದ್: ಪಾಕಿಸ್ತಾನ ಪಡೆಗಳು ಗುಂಡಿನ ದಾಳಿ ಮುಂದುವರೆಸಿದ್ದರಿಂದ ಐಬಿ ಮತ್ತು ಎಲ್ಒಸಿಯ 5 ಕಿ.ಮೀ ವ್ಯಾಪ್ತಿಯಲ್ಲಿನ ಶಾಲೆ ಕಾಲೇಜುಗಳಿಗೆ ಮೂರು ದಿನ ರಜೆ ಘೋಷಿಸಲಾಗಿದೆ. ಈ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಶಾಲೆಗಳಿವೆ.
ಯೋಧನ ಕುಟುಂಬಕ್ಕೆ ಆರ್ಥಿಕ ನೆರವು
ಲಖನೌ: ಪಾಕಿಸ್ತಾನ ಪಡೆಯ ಗುಂಡಿನ ದಾಳಿಗೆ ಶುಕ್ರವಾರ ಹುತಾತ್ಮರಾದ ಇಲ್ಲಿನ ಬುಲಂದ್ಶಹರ್ ಜಿಲ್ಲೆಯ ಬಿಎಸ್ಎಫ್ ಯೋಧ ಜಗ್ಪಾಲ್ ಸಿಂಗ್ (49) ಅವರ ಹೆಂಡತಿಗೆ ₹ 20 ಲಕ್ಷ, ಪೋಷಕರಿಗೆ ₹ 5 ಲಕ್ಷ ಪರಿಹಾರ ನೀಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.