ಕಾರಟಗಿ(ಕೊಪ್ಪಳ ಜಿಲ್ಲೆ): ಪಟ್ಟಣದಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ಅಗ್ನಿ ಅನಾಹುತದಲ್ಲಿ ವಾಹನ ಸೇರಿದಂತೆ 16 ಚಿಕ್ಕ ಅಂಗಡಿಗಳು ಭಸ್ಮವಾಗಿವೆ.
ಬೆಳಗಿನ ಜಾವ 4ಗಂಟೆ ಸುಮಾರಿಗೆ ಅನಾಹುತ ನಡೆದಿದ್ದು, ಅಡುಗೆ ಅನಿಲ ಸ್ಫೋಟಗೊಂಡಿದೆ.
ರಾಜ್ಯ ಹೆದ್ದಾರಿಯಲ್ಲಿರುವ ವಿಶೇಷ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿದ್ದ ಶೆಡ್ಗಳು ಬೆಂಕಿಗಾಹುತಿಯಾಗಿವೆ. ಪ್ರತಿ ಶೆಡ್ನಲ್ಲಿ ಇಬ್ಬರು, ಮೂವರು ವ್ಯಾಪಾರ ಮಾಡುತ್ತಿದ್ದರು. ಮೆಕ್ಯಾನಿಕ್, ಕಟಿಂಗ್ ಶಾಪ್, ಹೊಟೇಲ್, ಪಾನ್ ಅಂಗಡಿಗಳು ಶೆಡ್ಗಳಲ್ಲಿದ್ದವು.
ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವಾದಳ ತಂಡ ಬೆಂಕಿ ನಿಯಂತ್ರಿಸಿದ್ದಾರೆ. ಇದರಿಂದ ಬೆಂಕಿ ಇನ್ನಷ್ಟು ವ್ಯಾಪಿಸುವುದು ತಪ್ಪಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ.
ಘಟನೆಯಿಂದಾಗಿ ಹೆದ್ದಾರಿಯಲ್ಲಿ ಸಂಚರಿಸಬೇಕಿದ್ದ ವಾಹನಗಳು ಬದಲಿ ರಸ್ತೆಯಲ್ಲಿ ತೆರಳಿದವು. ಅನಾಹುತಕ್ಕೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಶಾಸಕ ಶಿವರಾಜ್ ತಂಗಡಗಿ ಸೇರಿದಂತೆ ಕಂದಾಯ, ಪೊಲೀಸ್, ಅಗ್ನಿಶಾಮಕ ಠಾಣೆ, ಜೆಸ್ಕಾಂ, ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.
‘ನಿತ್ಯದ ವ್ಯಾಪಾರದಿಂದಲೇ ನಮ್ಮ ಜೀವನ ಸಾಗುತ್ತಿತ್ತು. ಬೆಂಕಿ ನಮ್ಮ ಜೀವನವನ್ನೆಲ್ಲಾ ಆಹುತಿ ತೆಗೆದುಕೊಂಡಿದೆ. ಅಪಾರ ಹಾನಿಗೊಳಗಾಗಿದ್ದೇವೆ. ಜೀವನ ನಡೆಸುವುದು ಹೇಗೆಂದು ತಿಳಿಯದಾಗಿದೆ. ನಮಗೆ ಸಹಾಯ ಮಾಡಿ’ ಎಂದು ಹಾನಿಗೊಳಗಾದವರು ಬಂದವರಲ್ಲಿ ಅವಲತ್ತುಕೊಳ್ಳುವುದು ಸಾಮಾನ್ಯವಾಗಿತ್ತು.