ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಟ್ ಅಂಡ್ ರನ್ ನಾನಲ್ಲ, ಸಿದ್ದರಾಮಯ್ಯ: ಎಚ್.ಡಿ.ಕುಮಾರಸ್ವಾಮಿ

Last Updated 21 ಜನವರಿ 2018, 12:43 IST
ಅಕ್ಷರ ಗಾತ್ರ

ಕೊಪ್ಪಳ: ಹಿಟ್ ಆಂಡ್ ರನ್ ನಾನಲ್ಲ. ಅದು ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕುಟುಕಿದರು.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲದ ಸಂದರ್ಭದಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ  ಬಿ.ಎಸ್.ಯಡಿಯೂರಪ್ಪ ಅವರಿಂದ 8 ಕೋಟಿ ಪಡೆದರು ಎಂದು ಸಿಎಂ ಶಿಷ್ಯ ವರ್ತೂರು ಪ್ರಕಾಶ್ ಅವರು ಸಿದ್ದರಾಮಯ್ಯ ವಿರುದ್ಧ  ಆರೋಪಿಸಿದ್ದರು.  ಆದರೆ ಅದಕ್ಕೆ ಸಿದ್ದರಾಮಯ್ಯ ಉತ್ತರಿಸಿದ್ದಾರೆಯೇ? ಕೇವಲ ಹಾರಿಕೆಯ ಉತ್ತರ ಕೊಟ್ಟು ಜಾರಿಕೊಳ್ಳುವುದು ಸಿದ್ದರಾಮಯ್ಯ ಅವರ ಜಾಯಮಾನ ಎಂದು ಟೀಕಿಸಿದ್ದಾರೆ.

ಉನ್ನತ ಶಿಕ್ಷಣ ಸಚಿವ  ಬಸವರಾಜ ರಾಯರಡ್ಡಿ  ಅವರು ಈ ಹಿಂದೆ ವಿಶ್ವವಿದ್ಯಾಲಯಗಳ ಕುಲಪತಿಗಳು ದರೋಡೆಕೋರರು ಎಂದಿದ್ದರು. ಯಾರ ವಿರುದ್ಧವಾದರೂ ಕ್ರಮ ತೆಗೆದುಕೊಳ್ಳಲಾಗಿದೆಯೇ? ಕ್ರಮ ಜರುಗಿಸಲು ಇವರ ಬಳಿ ಸಾಕ್ಷ್ಯಾಧಾರಗಳು ಇರಬೇಕಲ್ಲವೇ? ಹೀಗೇ ಸುಮ್ಮನೆ ಹೇಳಿಕೆ ಕೊಡುತ್ತಾರೆ. ಅವರು ಕಷ್ಟಪಟ್ಟು ರಾಜಕೀಯಕ್ಕೆ ಬಂದವರಲ್ಲ. ಯಾವುದೋ ರಾಜಕೀಯ ಪಕ್ಷದ ಅಲೆಯಲ್ಲಿ ತೇಲಿ ಗೆದ್ದವರು ಎಂದರು.

ಈ ಹಿಂದೆ ಗಣಿ ಇಲಾಖೆಯ ಅಕ್ರಮಗಳ ಕುರಿತ ವರದಿಯನ್ನು ಲೋಕಾಯುಕ್ತರು ಕೊಟ್ಟಿದ್ದರು. ಆದರೆ ಇದರ ಬಗ್ಗೆ ನಾಲ್ಕು ವರ್ಷ ಏನು ಮಾತನಾಡದ ಸಿದ್ದರಾಮಯ್ಯ ಅವರು ಇದೀಗ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಗುತ್ತಿದ್ದಂತೆಯೇ ಎಸ್ಐಟಿಗೆ ನೀಡಿದ್ದಾರೆ.

ಸತ್ಯಾಂಶ ಹೊರತಂದು ಸರ್ಕಾರಕ್ಕೆ ಆಗಿರುವ ನಷ್ಟ ಭರ್ತಿ ಮಾಡಬೇಕು ಎಂಬ ಉದ್ದೇಶವಿಲ್ಲ. ಕುಂದಿರುವ ಪಕ್ಷದ ವರ್ಚಸ್ಸನ್ನು ವೃದ್ಧಿಸಿಕೊಳ್ಳಲು ಎಸ್ಐಟಿ ಎಂಬ ಬ್ರಹ್ಮಾಸ್ತ್ರ  ಬಿಡಲು ಹೊರಟಿದ್ದಾರೆ. ಸಿದ್ದರಾಮಯ್ಯ ಅವರ ಬ್ರಹ್ಮಾಸ್ತ್ರಕ್ಕೆ ಹಾಗೂ ಹುನ್ನಾರಕ್ಕೆ ನಮ್ಮ ಪಕ್ಷದಲ್ಲಿ ಯಾರೂ ಹೆದರುವ ಪ್ರಶ್ನೆ ಇಲ್ಲ ಎಂದರು.

ಅಲ್ಲದೇ ಕಾಂಗ್ರೆಸ್‌ನವರು ತಮ್ಮ ಪಕ್ಷವನ್ನು ಬಲಪಡಿಸಿಕೊಳ್ಳಲು ಬೇರೆ ಪಕ್ಷದವರನ್ನು ಬೆದರಿಸಿ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಜಂತಕಲ್ ಮೈನಿಂಗ್ ಪ್ರಕರಣಕ್ಕೆ ಬೆನ್ನೂ ಇಲ್ಲ ಮೂಳೆಯೂ ಇಲ್ಲ. ಅದರಲ್ಲಿ ನನ್ನ ಪಾತ್ರ ಏನಿದೆ? ಸುಮ್ಮನೆ ನನ್ನ ಮೇಲೆ ಕೇಸು ದಾಖಲಿಸಿದ್ದಾರೆ. ಇದರಿಂದ ಸರ್ಕಾರ ನಗೆಪಾಟಲಿಗೀಡಾಗಿದೆ. ಜನರು ಕಾಂಗ್ರೆಸ್ ಹಾಗೂ ಬಿಜೆಪಿ ನಡವಳಿಕೆಯಿಂದ ಬೇಸತ್ತಿದ್ದು, ಜನತಾದಳ ಬೆಂಬಲಿಸುವ ಮನೋಭಾವ ತಳೆದಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT