ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಧರ್ಮ: ಜನಗಣತಿಗಳು ಸೃಷ್ಟಿಸಿದ ಆವಾಂತರ

Last Updated 21 ಜನವರಿ 2018, 19:30 IST
ಅಕ್ಷರ ಗಾತ್ರ

ಬ್ರಿಟಿಷರು ಆಡಳಿತದ ಉದ್ದೇಶಕ್ಕಾಗಿ 1871ರಲ್ಲಿ ಆರಂಭಿಸಿದ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಗಳು ಪ್ರಾಚೀನ ಕಾಲದಿಂದ ನಡೆದು ಬಂದಿದ್ದ ಭಾರತದ ಸಮಾಜ ಮತ್ತು ಸಂಸ್ಕೃತಿಯ ಮೇಲೆ ಸಾಕಷ್ಟು ಪರಿಣಾಮ ಬೀರಿವೆ.

ಈ ಜನಗಣತಿಗಳು ವಿವಿಧ ಧಾರ್ಮಿಕ ಸಮುದಾಯ ಮತ್ತು ಜಾತಿಗಳಲ್ಲಿ ಅವರ ಅಸ್ಮಿತೆಯ ಅರಿವು ಮೂಡಿಸಿದವು. ಜನಸಂಖ್ಯೆಯ ಪ್ರಮಾಣದ ಅರಿವು ಸಮುದಾಯಗಳ ನಡುವಿನ ಸಾಂಖಿಕ ಬಲಾಬಲದ ಪೈಪೋಟಿಗೆ ಕಾರಣವಾಯಿತು. ಇತರ ಸಮುದಾಯಗಳೊಂದಿಗೆ ಹೋಲಿಸಿ ನೋಡುವ ಮನೋಭಾವದಿಂದ ಈ ಗುಂಪುಗಳು ತಮ್ಮ ಸ್ಥಾನಮಾನ ಮತ್ತು ಸವಲತ್ತುಗಳಿಗಾಗಿ ಹೋರಾಟದ ಹಾದಿ ಹಿಡಿದವು. ಈಗ ಕೇಳಿ ಬರುತ್ತಿರುವ ಲಿಂಗಾಯತರ ಸ್ವತಂತ್ರ ಧರ್ಮದ ಬೇಡಿಕೆಯೂ ಜನಗಣತಿಗಳಿಂದ ಪ್ರಭಾವಿತವಾಗಿದೆ. 

1871 ಜನಗಣತಿ ಮತ್ತು ಸ್ವತಂತ್ರ ಧರ್ಮವಾಗಿ ಲಿಂಗಾಯತ: 1871ರಲ್ಲಿ ಮೈಸೂರಿನಲ್ಲಿ ನಡೆದ ಪ್ರಪ್ರಥಮ ಜನಗಣತಿಯು ಭಾರತೀಯ ಮೂಲದ ಧರ್ಮಗಳನ್ನು ಒಂದನೆಯ ಗುಂಪಿನಲ್ಲಿರಿಸಿತು. ಮುಸ್ಲಿಮರನ್ನು ಎರಡನೆಯ ಗುಂಪು, ಕ್ರೈಸ್ತರನ್ನು ಮೂರನೆಯ ಗುಂಪು ಮತ್ತು ಪಾರ್ಸಿಗಳನ್ನು ನಾಲ್ಕನೆಯ ಗುಂಪು ಎಂದು ವಿಂಗಡಿಸಿತು.

ಒಂದನೆಯ ಗುಂಪಿನ ಹಿಂದೂ ಧರ್ಮದ ನಾಲ್ಕು ವರ್ಣಗಳನ್ನು ಕ್ರಮವಾಗಿ ಅ, ಬ, ಕ, ಮತ್ತು ಡ ಎಂದು ವಿಂಗಡಿಸಿತು. ’ಅ’ ಗುಂಪಿನಲ್ಲಿ ಬ್ರಾಹ್ಮಣ ವರ್ಣದ ಮೂರು ಗುಂಪುಗಳಲ್ಲಿ 56 ಜಾತಿಗಳನ್ನು ಗುರುತಿಸಲಾಯಿತು. ಅದೇ ರೀತಿ ’ಬ’ ಗುಂಪಿನಲ್ಲಿ ಕ್ಷತ್ರಿಯ ವರ್ಣದ 5 ಗುಂಪುಗಳಲ್ಲಿ 19 ಜಾತಿ, ’ಕ’ ಗುಂಪಿನಲ್ಲಿ ವೈಶ್ಯ ವರ್ಣದ 6 ಗುಂಪುಗಳಲ್ಲಿ 10 ಜಾತಿ ಮತ್ತು ’ಡ’ ಗುಂಪಿನಲ್ಲಿ ಶೂದ್ರ ವರ್ಣದ 22 ಗುಂಪುಗಳಲ್ಲಿ 183 ಜಾತಿಗಳನ್ನು ಗುರುತಿಸಿ ಅವುಗಳ ಜನಸಂಖೆ ತೋರಿಸಲಾಗಿತ್ತು. ಮೈಸೂರು ರಾಜ್ಯದಲ್ಲಿ ಆಗ ಒಟ್ಟು 268 ಹಿಂದೂ ಜಾತಿಗಳಿದ್ದವು. ಲಿಂಗಾಯತ ಇದರಲ್ಲಿ ಇರಲಿಲ್ಲ!

ಸ್ವತಂತ್ರ ಧರ್ಮಗಳ ಗುಂಪಿನಲ್ಲಿ ಲಿಂಗಾಯತ: ಒಂದನೆಯ ಗುಂಪಿನ ’ಇ’ ವರ್ಗದಲ್ಲಿ ಜೈನ, ಬೌದ್ಧ ಮತ್ತು ಲಿಂಗಾಯತ ಧರ್ಮಗಳನ್ನು ಸೇರಿಸಲಾಗಿತ್ತು. ಇದರ ಅರ್ಥವೆಂದರೆ ಬ್ರಿಟಿಷರು ಭಾರತ ಮೂಲದ ಧರ್ಮಗಳನ್ನು ಪ್ರತ್ಯೇಕ ಗುಂಪಿಗೆ ಸೇರಿಸಿ ಪರಕೀಯ (ಮುಸ್ಲಿಂ, ಕ್ರೈಸ್ತ, ಮತ್ತು ಪಾರ್ಸಿ) ಧರ್ಮಗಳಿಂದ ಬೇರ್ಪಡಿಸಿದ್ದರು. ಅದೆ ಮಾನದಂಡವನ್ನು ಸ್ವಾತಂತ್ರ್ಯ ನಂತರದ ನಮ್ಮ ನೇತಾರರೂ ಮುಂದುವರೆಸಿದರು.

ಹಿಂದೂ ಧರ್ಮದ ಅ,ಬ,ಕ, ಮತ್ತು ಡ ಗುಂಪುಗಳಲ್ಲಿ ಸೇರಿಸಲಾದ ಸಮುದಾಯಗಳು ವರ್ಣಾಶ್ರಮ ಪದ್ಧತಿಯಲ್ಲಿನ ಜಾತಿಗಳಾಗಿವೆ. ಆದರೆ ಲಿಂಗಾಯತವನ್ನು ಅವುಗಳಲ್ಲಿ ಸೇರಿಸಲಾಗಿಲ್ಲ. ಆದ್ದರಿಂದ ಲಿಂಗಾಯತವು ಹಿಂದೂ ವರ್ಣಾಶ್ರಮ ಧರ್ಮದ ಒಂದು ಭಾಗವೆಲ್ಲವೆಂಬುದು ಸ್ಪಷ್ಟ.

ಒಂದನೆಯ ಗುಂಪಿನ ’ಇ’ ಯಲ್ಲಿ ಲಿಂಗಾಯತವನ್ನು ಜೈನ ಮತ್ತು ಬೌದ್ಧ ಧರ್ಮಗಳೊಂದಿಗೆ ಸಮೀಕರಿಸಿದ್ದರಿಂದ ಅದು ಭಾರತ ಮೂಲದ ಪ್ರತ್ಯೇಕ ಧರ್ಮವೆಂಬುದೂ ಸ್ಪಷ್ಟವಾಗುತ್ತದೆ.

ಇದೇ ಅಂಶಗಳನ್ನು 1871ರ ಜನಗಣತಿ ವರದಿಯ ಪ್ಯಾರಾ 22ರಲ್ಲಿ ಹೀಗೆ ನಮೂದಿಸಲಾಗಿದೆ: ’ಇದು (ಲಿಂಗಾಯತ) ಒಂದು ಬಹುಸಂಖ್ಯೆಯ ವರ್ಗ ಅಥವಾ ಒಂದು ಧರ್ಮ ಬಹುತೇಕ ಎಲ್ಲ ಜಾತಿಗಳನ್ನು ಒಳಗೊಂಡಿದೆ. ಆದರೆ, ಅಜ್ಞಾನಿಗಳು ಅದನ್ನು ಜಾತಿಯೆಂದು ತಿಳಿಯುತ್ತಾರೆ. ಆದ್ದರಿಂದ ಜನಗಣತಿಗೆ ಮಾಹಿತಿ ಪಡೆಯುವಾಗ ಎಚ್ಚರಿಕೆ ವಹಿಸಿ ವ್ಯಕ್ತಿಯ ಸರಿಯಾದ ಜಾತಿ,ಪಂಗಡ ತಿಳಿದುಕೊಂಡು ಲಿಂಗಾಯತ ಧರ್ಮವೆಂದು ಬರೆಯಬೇಕು. ವಿವೇಚನೆ ಇಲ್ಲದೆ ಸಂಗ್ರಹಿಸಿದ ಮಾಹಿತಿಯಿಂದ ಲಿಂಗಾಯತವನ್ನು ಜಾತಿಯೆಂದು ತೋರಿಸುವುದು ಸ್ಪಷ್ಟವಾದ ತಪ್ಪು’.

ಪ್ಯಾರಾ 42ರಲ್ಲಿ ಹೀಗೆ ಹೇಳಿದೆ– ’ಹಿಂದೂ ಧರ್ಮದಲ್ಲಿ ವೈಷ್ಣವ ಮತ್ತು ಶೈವ ಎಂಬ ಎರಡು ವಿಭಾಗಗಳಿವೆ. ಎಲ್ಲ ಜಾತಿಗಳನ್ನು ಅವೆರಡರಲ್ಲಿ ಒಂದಕ್ಕೆ ಸೇರಿಸಿ ವರ್ಗೀಕರಿಸಬಹುದು. ಜನಗಣತಿಯ ಮಾಹಿತಿಯಲ್ಲಿ ಲಿಂಗಾಯತವನ್ನು ಜಾತಿ ಮತ್ತು ಧರ್ಮ ಎರಡೂ ಎಂದೂ, ಕೆಲವೊಮ್ಮೆ ಕೇವಲ ಧರ್ಮವೆಂದು ಉಪಯೋಗಿಸಲಾಗಿದೆ. ಸರಿಯಾದ ಮಾತೆಂದರೆ ’ಲಿಂಗಾಯತ ಜಾತಿ’ ಎಂಬುದಿಲ್ಲ. ಆದರೆ, ಅನೇಕ ಜಾತಿಗಳು ಲಿಂಗಾಯತ ಧರ್ಮದಲ್ಲಿವೆ’.

ಅದೇ ವರದಿಯ ಪ್ಯಾರಾ 173ರಲ್ಲಿ ’ಲಿಂಗಾಯತವನ್ನು ಜಾತಿಯೆಂದು ಪರಿಗಣಿಸಲಾಗದು. ಅದು ಒಂದು ಧರ್ಮ. ಅನೇಕ ಜಾತಿಗಳು ಅದಕ್ಕೆ ಸಂಬಂಧಿಸಿವೆ’ ಎಂದು ಸ್ಪಷ್ಟವಾಗಿ ಬರೆಯಲಾಗಿದೆ.

ಹೀಗೆ 1871ರ ಜನಗಣತಿಯು ಮೈಸೂರು ರಾಜ್ಯದಲ್ಲಿರುವ ಲಿಂಗಾಯತರಲ್ಲಿ 22 ಪಂಗಡಗಳನ್ನು ಗುರುತಿಸಿದೆ. ಆಗ ಮೈಸೂರು ರಾಜ್ಯದಲ್ಲಿ ಲಿಂಗಾಯತರ ಜನಸಂಖ್ಯೆ 4,17,900 (ಶೇ 8.6) ರಷ್ಟಿತ್ತು. ಆದರೆ, ಆ 22 ಉಪಪಂಗಡಗಳಲ್ಲಿ ’ವೀರಶೈವ’ ಎಂಬ ಉಪಪಂಗಡವೇ ಇಲ್ಲವೆಂಬುದು ಅತ್ಯಂತ ಮಹತ್ವದ ಅಂಶ. ಅದೇ ರೀತಿ ಸಾದರ ಪಂಗಡವನ್ನು ’ಶೂದ್ರ’ದ ಪ್ರತ್ಯೇಕ ಗುಂಪು ಎಂದು ಮತ್ತು ನೊಣಬ, ಲಾಲಗೊಂಡ ಪಂಗಡಗಳನ್ನು ಶೂದ್ರ ಒಕ್ಕಲಿಗರ ಗುಂಪಿಗೆ ಸೇರಿಸಲಾಗಿತ್ತು.

1881ರ ಜನಗಣತಿ: ನಾಪತ್ತೆಯಾದ ಲಿಂಗಾಯತ! 
1881ರ ಜನಗಣತಿಯಲ್ಲಿ ಲಿಂಗಾಯತ ಧರ್ಮವನ್ನು ಸಂಪೂರ್ಣವಾಗಿ ವಿಸರ್ಜಿಸಿ ಅದರ ಎಲ್ಲ ಉಪಪಂಗಡಗಳನ್ನು ಹಿಂದೂ ಧರ್ಮದ ಶೂದ್ರರ ಗುಂಪಿಗೆ ಸೇರಿಸಲಾಯಿತು. ಅದರಲ್ಲಿಯೂ ’ವೀರಶೈವ’ ಎಂಬ ಉಪಜಾತಿಯೇ ಇರಲಿಲ್ಲ. 1871ರಿಂದ 1881ರ ವರೆಗಿನ ಹತ್ತೇ ವರ್ಷಗಳಲ್ಲಿ ಮಾಡಿದ ಈ ಮಹತ್ತರ ಬದಲಾವಣೆಗೆ ಯಾವುದೇ ಕಾರಣವನ್ನೂ ದಾಖಲಿಸಿಲ್ಲ.

1871ರ ಜನಗಣತಿ ನಡೆದಾಗ ಮೈಸೂರನ್ನು ಬ್ರಿಟಿಷರೇ ನೇರವಾಗಿ ಆಳುತ್ತಿದ್ದರು. ಎ.ಡಬ್ಲ್ಯೂ.ಸಿ. ಲಿಂಡ್ಸೆ ಎಂಬ ಆಂಗ್ಲ ಅಧಿಕಾರಿಯು 1871ರ ಜನಗಣತಿಯ ಮುಖ್ಯಸ್ಥರಾಗಿದ್ದರು. ಬ್ರಿಟಿಷ್‌ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಜನಗಣತಿ ನಡೆಸಿದ್ದರು. ಶತಶತಮಾನಗಳ ಲಿಂಗಾಯತರ ನಂಬಿಕೆ, ಸಂಪ್ರದಾಯ ಮತ್ತು ಆಚರಣೆಗಳನ್ನು ಆಧರಿಸಿ ಜನಗಣತಿಯ ದಾಖಲೆ ತಯಾರಾಗಿತ್ತು. ಹೀಗಾಗಿ, ಲಿಂಗಾಯತವು ಸ್ವತಂತ್ರ ಧರ್ಮವೆಂದು ದಾಖಲಾಗಿತ್ತು.

ಆದರೆ, 1881ರ ಜನಗಣತಿಯ ವೇಳೆಗೆ ಮೈಸೂರು ಮಹಾರಾಜರಿಗೆ ಅಧಿಕಾರ ತಿರುಗಿ ದೊರೆತಿತ್ತು. ಅಂದಿನ ದಿವಾನರಾಗಿದ್ದ ಸಿ. ರಂಗಾಚಾರಿಯವರೇ ಜನಗಣತಿಯ ಮಾಹಿತಿಯನ್ನು ಸಂಗ್ರಹಿಸುವ ಜವಾಬ್ದಾರಿ ವಹಿಸಿಕೊಡಿದ್ದರು. ಅವರು ಅಕಾಲಿಕವಾಗಿ 1883ರಲ್ಲಿ ನಿಧನರಾದ್ದರಿಂದ ಜನಗಣತಿಯ ಅಂತಿಮ ವರದಿಯನ್ನು ತಯಾರಿಸಿದ ಬಿ.ಎಲ್. ರೈಸ್‌ 1ನೆಯ ಅಧ್ಯಾಯದಲ್ಲಿ ಹೀಗೆ ದಾಖಲಿಸಿದ್ದಾರೆ: ’1881ರಲ್ಲಿ ನಡೆಸಿದ ಜನಗಣತಿಯ ವರದಿಯನ್ನು ತಾವೇ ಬರೆಯಲು ದಿವಂಗತ ದಿವಾನ್‌ ರಂಗಾಚಾರಿ ಅವರು ಬಯಸಿದ್ದರು.

ಅವರೇ ಬರೆದಿದ್ದರೆ ಅದಕ್ಕೊಂದು ವಿಶೇಷ ರಂಗು ಮತ್ತು ಯಜಮಾನಿಕೆ ಇರಬಹುದಾಗಿತ್ತು. ಆದರೆ, 1883ರ ಜನವರಿಯಲ್ಲಿ ಸಾಯುವ ಮುನ್ನ ಈ ವಿಷಯದಲ್ಲಿ ಉದ್ಭವಿಸುವ ಸಮಸ್ಯೆಗಳ ಕುರಿತು ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ಅವರು ಬರೆಯಲು ಪ್ರಾರಂಭಿಸಿರಲಿಲ್ಲ. ಈ ಕಾರ್ಯವನ್ನು 1883ರ ಮಧ್ಯದಲ್ಲಿ ನನ್ನ ಕೈಗೆ ಕೊಡಲಾಯಿತು’. ಇದು 1881ರ ಜನಗಣತಿಯಲ್ಲಿ ರಂಗಾಚಾರಿಯವರ ಪಾತ್ರವನ್ನು ಸ್ಪಷ್ಟ ಪಡಿಸುತ್ತದೆ.

1868ರಿಂದ 15 ವರ್ಷ ಮೈಸೂರಿನ ಸೇವೆಯಲ್ಲಿದ್ದ ರಂಗಾಚಾರಿಯವರು ಮೈಸೂರಿನ ಇತಿಹಾಸ ಮತ್ತು ಅದರಲ್ಲಿ ಲಿಂಗಾಯತರ ಪಾತ್ರದ ಬಗ್ಗೆ ತಿಳಿದಿದ್ದರು. ಮುಮ್ಮಡಿ ಕೃಷ್ಣರಾಜ ಒಡೆಯರ್‌ 1831ರಿಂದ 1881ರ ವರೆಗೆ 50 ವರ್ಷ ಅಧಿಕಾರ ಕಳೆದುಕೊಳ್ಳಲು ’ನಗರದ ದಂಗೆ’ ಮೂಲಕ ಕಾರಣರಾದವರೇ ಲಿಂಗಾಯತರು. ಎರಡನೆಯದಾಗಿ, 15ನೆಯ ಶತಮಾನದಿಂದ ಲಿಂಗಾಯತರಾಗಿದ್ದ ಮೈಸೂರಿನ ಅರಸರು 1610ರಲ್ಲಿ ರಾಜ ಒಡೆಯರ್‌ ಅವರ ಕಾಲದಲ್ಲಿ ವೈಷ್ಣವರಾಗಿ ಪರಿವರ್ತನೆಗೊಂಡಾಗಿನಿಂದ ಅಸಂತುಷ್ಟರಾಗಿದ್ದವರೆ ಲಿಂಗಾಯತರು.

ಮೂರನೆಯದಾಗಿ, 1678ರಲ್ಲಿ ಚಿಕ್ಕ ದೇವರಾಜರು ವಿಧಿಸಿದ್ದ ವಿಪರೀತ ತೆರಿಗೆಗಳ ವಿರುದ್ಧ ದಂಗೆ ಎದ್ದವರೂ ಲಿಂಗಾಯತರೆ. ಆ ದಂಗೆಯ ನೇತೃತ್ವ ವಹಿಸಿದ್ದ 770 ಲಿಂಗಾಯತ ಮಠಾಧೀಶರಲ್ಲಿ 440 ಮಠಾಧೀಶರನ್ನು ಮೋಸದಿಂದ ಚಿಕ್ಕದೇವರಾಜರು ಕೊಲ್ಲಿಸಿ ’ಜಂಗಮ ಕ್ರಾಂತಿ’ಯನ್ನು ಸದೆಬಡಿದರು. ಮುಚ್ಚಿಡಲಾಗಿದ್ದ ಈ ಐತಿಹಾಸಿಕ ಸತ್ಯವನ್ನು ಬ್ರಿಟಿಷ್‌ ಅಧಿಕಾರಿ ವಿಲ್ಕಸ್‌ ಎಂಬುವರು ಬಹಿರಂಗಗೊಳಿಸಿದರು.

ಅಧಿಕಾರ ಮರಳಿ ಬಂದಾಗ ಇಂತಹ ಹಿನ್ನೆಲೆಯ ಲಿಂಗಾಯತರನ್ನು ಹದ್ದುಬಸ್ತಿನಲ್ಲಿ ಇಡಬೇಕಾಗಿತ್ತು. ಅದಕ್ಕಾಗಿ 1881ರ ಜನಗಣತಿಯಲ್ಲಿ ರಂಗಾಚಾರಿಯವರು ಲಿಂಗಾಯತರನ್ನು ಮೂಲೆಗುಂಪು ಮಾಡಲು ಉದ್ದೇಶಪೂರ್ವಕವಾಗಿಯೇ ಲಿಂಗಾಯತ ಧರ್ಮವನ್ನು ವಿಸರ್ಜಿಸಿ ಅದರ ಉಪ ಪಂಗಡಗಳನ್ನು ಹಿಂದೂ ಧರ್ಮದ ’ಶೂದ್ರ’ ಗುಂಪಿಗೆ ಸೇರಿಸಿದ್ದರು.

1891ರ ಜನಗಣತಿ: ಲಿಂಗಾಯತರಿಗೆ ಪ್ರತ್ಯೇಕ ಕೋಡ್
1881ರ ಜನಗಣತಿಯಲ್ಲಿ ತಮ್ಮನ್ನು ’ಶೂದ್ರ’ರೆಂದು ಪರಿಗಣಿಸಿದ್ದರ ವಿರುದ್ಧ ಮೈಸೂರಿನ ಉನ್ನತ ವರ್ಗದ ಲಿಂಗಾಯತರು ಹೋರಾಟ ನಡೆಸಿದರು. ’ಸ್ಟಾರ್‌ ಆಫ್ ಮೈಸೂರ’ ಪತ್ರಿಕೆಯನ್ನು ಸ್ಥಾಪಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ತಮ್ಮನ್ನು ’ವೀರ ಮಾಹೇಶ್ವರ ಬ್ರಾಹ್ಮಣ’ರೆಂದು ಪರಿಗಣಿಸಲು ಮಹಾರಾಜರ ಮೊರೆ ಹೋದರು.

ಮೈಸೂರು ಮಹಾರಾಜರು ಲಿಂಗಾಯತರಿಗೆ 1891ರ ಜನಗಣತಿಯಲ್ಲಿ ಪ್ರತ್ಯೇಕ ಕೋಡ್ ನೀಡಿದರು. ಆದರೆ, ಅವರು ಶೂದ್ರರೆಂಬ ಸ್ಥಾನವನ್ನು ಬದಲಿಸಲಿಲ್ಲ. ಪ್ರತ್ಯೇಕ ಕೋಡ್ ನಂಬರಿನ ಮೂಲಕ 1891ರ ಜನಗಣತಿ ನಡೆದಾಗ ಲಿಂಗಾಯತರಲ್ಲಿ 38 ಉಪಜಾತಿಗಳು ಪತ್ತೆಯಾದವು. ಸಾದರ, ನೊಣಬ ಮತ್ತು ಲಾಲಗೊಂಡರನ್ನು ಲಿಂಗಾಯತ ಗುಂಪಿಗೆ ಸೇರಿಸಲಾಯಿತು. ಹಿಂದೆಂದೂ ಕಾಣದ ’ವೀರಶೈವ’ ಪದ ಹೊಸದಾಗಿ ಸೇರಿತು. 1891ರಿಂದ 1931ರ ವರೆಗೆ ಇದೇ ಮುಂದುವರೆಯಿತು. ಈ ರೀತಿಯ ಕುತಂತ್ರದಿಂದ ಲಿಂಗಾಯತವು ಜನಗಣತಿಗಳಲ್ಲಿ ಹಿಂದೂ ಧರ್ಮದ ಒಂದು ಜಾತಿ ಎಂದು ದಾಖಲಾಯಿತು.

ಲೇಖಕ: ಲಿಂಗಾಯತ ಸ್ವತಂತ್ರ ಧರ್ಮ ವೇದಿಕೆ ಸಂಚಾಲಕ, ನಿವೃತ ಐ.ಎ.ಎಸ್‌ ಅಧಿಕಾರಿ
ಓದುಗರು ತಮ್ಮ ಅಭಿಪ್ರಾಯಗಳನ್ನು ಯೂನಿಕೋಡ್‌ ಅಥವಾ ನುಡಿ ತಂತ್ರಾಂಶದಲ್ಲಿ ಈ ವಿಳಾಸಕ್ಕೆ ಕಳುಹಿಸಬಹುದು.
samvada@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT