ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

Last Updated 22 ಜನವರಿ 2018, 9:00 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಸಿದ್ದನಬಾವಿ, ಬೇಡಿಗೇರಿ ಮತ್ತು ಮುತ್ನಾಳ ಗ್ರಾಮದ ಕೆರೆಗಳಿಗೆ ಮಲಪ್ರಭಾ ನದಿಯಿಂದ ನೀರು ತುಂಬಿಸುವ ಯೋಜನೆಯ ಭೂಮಿಪೂಜೆ ಕಾರ್ಯಕ್ರಮು ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಜಟಾಪಟಿಯಿಂದಾಗಿ ಗೊಂದಲದ ಗೂಡಾಯಿತು.

ಜಲಸಂಪನ್ಮೂಲ ಹಾಗೂ ನೀರಾವರಿ ನಿಗಮದಿಂದ ಭಾನುವಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕ್ಷೇತ್ರ ಪ್ರತಿನಿಧಿಸುತ್ತಿರುವ ಬಿಜೆಪಿ ಶಾಸಕ ಸಂಜಯ ಪಾಟೀಲ ಹಾಗೂ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮತ್ತು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಬೆಂಬಲಿಗರ ನಡುವೆ ಪ್ಲೆಕ್ಸ್‌ ಹಾಕುವ ವಿಚಾರಕ್ಕೆ ಬೆಳಿಗ್ಗೆ ಗಲಾಟೆ ನಡೆದಿತ್ತು. ಇದು, ಭೂಮಿಪೂಜೆ ವೇಳೆಯೂ ಮುಂದುವರಿಯಿತು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಶಾಸಕ ಸಂಜಯ ಪಾಟೀಲ, ಸಂಸದ ಸುರೇಶ ಅಂಗಡಿ, ವಿಧಾನಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಎದುರಿನಲ್ಲೇ, ಎರಡೂ ಪಕ್ಷಗಳ ಕಾರ್ಯಕರ್ತರು ಬಾವುಟಗಳನ್ನು ಹಿಡಿದು ಘೋಷಣೆ ಕೂಗಿದರು. ಇದರಿಂದಾಗಿ, ಭೂಮಿಪೂಜೆ ಸುಗಮವಾಗಿ ನಡೆಯಲು ಅಡ್ಡಿಯಾಯಿತು.

ಮೋದಿ... ಅಕ್ಕ...: ಎರಡೂ ಗುಂಪುಗಳ ನಡುವೆ ತಳ್ಳಾಟ, ನೂಕಾಟ ನಡೆಯಿತು. ಯೋಜನೆಗೆ ಚಾಲನೆ ಕೊಡಿಸುತ್ತಿರುವ ಕೀರ್ತಿ ನಮ್ಮ ಪಕ್ಷಕ್ಕೇ ಸಲ್ಲಬೇಕೆಂದು ಎರಡೂ ಪಕ್ಷಗಳವರು ‍ಪ್ರಹಸನ ನಡೆಸಿದರು. ಬಿಜೆಪಿ ಕಾರ್ಯಕರ್ತರು ಮೋದಿ... ಮೋದಿ... ಎಂದು ಘೋಷಣೆ ಕೂಗಿದರೆ, ಕಾಂಗ್ರೆಸ್ ಕಾರ್ಯಕರ್ತರು ಅಕ್ಕ... ಲಕ್ಷ್ಮಿ ಅಕ್ಕ... ಎಂದು ಘೋಷಣೆ ಕೂಗಿದರು. ಈ ಪ್ರಹಸನಕ್ಕೆ ಎರಡೂ ಪಕ್ಷಗಳ ಮುಖಂಡರು ಸಾಕ್ಷಿಯಾದರು.

ಉಭಯ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಲು ಸಚಿವ ರಮೇಶ ಜಾರಕಿಹೊಳಿ ಪ್ರಯತ್ನಿಸಿದರು. ಈ ನಡುವೆ ಕಾರ್ಯಕರ್ತರು ಕೈ–ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ತಾ.ಪಂಸದಸ್ಯ ಶಂಕರಗೌಡ ಪಾಟೀಲ ಬಿಜೆಪಿ ಮುಖಂಡರ ವಿರುದ್ಧ ತಿರುಗಿಬಿದ್ದರು. ಎರಡೂ ಕಡೆಯವರು ಏರುದನಿಯಲ್ಲಿ ಮಾತನಾಡತೊಡಗಿದ್ದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಎರಡೂ ಕಡೆಯ ಕಾರ್ಯಕರ್ತರನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸಪಟ್ಟರು.

‘ಇದೇನು ಸರ್ಕಾರದ್ದೋ, ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮವೋ?’ ಎಂದು ಮಹಾಂತೇಶ ಕವಟಗಿಮಠ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಿ.ಎಂ ಅಭಿನಂದಿಸಿದ ಸಂಸದ: ‘ಸಿದ್ದನ ಬಾವಿ, ಬೆಂಡಿಗೇರಿ ಹಾಗೂ ಮುತ್ನಾಳ ಕೆರೆಗಳಿಗೆ ನೀರು ತುಂಬಿಸುತ್ತಿರುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪ‍ನ್ಮೂಲ ಸಚಿವ ಎಂ.ಬಿ.ಪಾಟೀಲ ಅವರನ್ನು ಅಭಿನಂದಿಸುತ್ತೇನೆ. ಕಾರ್ಯಕರ್ತರ ಗೊಂದಲದಿಂದ, ಜಟಾಪಟಿ ನಡೆಯಿತು’ ಎಂದು ಸಂಸದ ಸುರೇಶ ಅಂಗಡಿಹೇಳಿದರು.

ಸಿದ್ದನಬಾವಿ, ಬೆಂಡಿಗೇರಿ ಹಾಗೂ ಮುತ್ನಾಳ ಗ್ರಾಮಗಳು ಮಲಪ್ರಭಾ ನದಿಯಿಂದ 15 ಕಿ.ಮೀ. ದೂರದಲ್ಲಿವೆ. ಈ ಭಾಗದಲ್ಲಿ ವಾರ್ಷಿಕ 714.2 ಮಿ.ಮೀ.ಗಳಷ್ಟು ವಾಡಿಕೆ ಮಳೆ ಇದೆ. ಕೆಲವು ವರ್ಷಗಳಿಂದ ಮಳೆ ಪ್ರಮಾಣ ಕಡಿಮೆಯಾಗಿದೆ. ಪರಿಣಾಮ, ಜನ–ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗುತ್ತಿದೆ. ಈ ಸಮಸ್ಯೆ ಪರಿಹರಿಸಲು ಪಾರಿಶ್ವಾಡ ಗ್ರಾಮದ ಬಳಿ ಜಾಕ್‌ವೆಲ್‌ ಮಲಪ್ರಭಾ ನದಿ ದಂಡೆಯಲ್ಲಿ ಜಾಕ್‌ವೆಲ್‌ ನಿರ್ಮಿಸಿ ಪೈಪ್‌ಲೈನ್‌ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT