ಪುಣೆ: ಮನೆಯ ಮುಂದೆ ವಾಹನ ನಿಲ್ಲಿಸಲು ಆಕ್ಷೇಪ ವ್ಯಕ್ತಪಡಿಸಿದ ಕಾರಣಕ್ಕೆ ಐಟಿ ಇಂಜಿನಿಯರ್ಗೆ ಮೂವರು ದುಷ್ಕರ್ಮಿಗಳು ಕಬ್ಬಿಣದ ಸರಳು ಹಾಗೂ ಕಲ್ಲಿನಿಂದ ಹೊಡೆದು ಹತ್ಯೆಗೈದ ಘಟನೆ ಖಂಡ್ವಾದಲ್ಲಿ ನಡೆದಿದೆ.
ನೆವಿಲ್ಲೆ ಬಟಿವಾಲಾ (39) ಮೃತ ಇಂಜಿನಿಯರ್. ಇವರನ್ನು ಹತ್ಯೆಗೈದ ಮೂವರು ಆರೋಪಿಗಳಾದ ಶ್ರೀಗಣೇಶ್ ರಾಸ್ಕರ್, ಯೋಗೇಶ್ ಕಡ್ವೆ, ವಿಕ್ರಮ್ ಬೊಂಬೆ ಅವರನ್ನು ಬಂಧಿಸಲಾಗಿದೆ.
ಸಾರಿಗೆ ಸಂಸ್ಥೆ ನಡೆಸುತ್ತಿದ್ದ ಶ್ರೀಗಣೇಶ್ ರಾಸ್ಕರ್ ಅವರ ವಾಹನ ಚಾಲಕರು ಬಟಿವಾಲ ಮನೆಯ ಗೇಟಿನ ಮುಂದೆ ವಾಹನ ನಿಲ್ಲಿಸಲು ಬಂದಿದ್ದಾರೆ. ಆಗ ಬಟಿವಾಲಾ ಅವರು ಮನೆಯ ಮಹಡಿಯ ಮೇಲೆ ಪಾರ್ಟಿ ಮಾಡುತ್ತಿದ್ದರು. ಇದನ್ನು ಕಂಡ ಅವರು ವಾಹನ ನಿಲ್ಲಿಸಲು ವಿರೋಧ ವ್ಯಕ್ತಪಡಿಸಿದ್ದಾರೆ.
ಆಗ ನಾಲ್ವರ ಮಧ್ಯೆ ಜಗಳ ತಾರಕಕ್ಕೇರಿ ಬಟಿವಾಲಾ ಅವರಿಗೆ ಈ ಮೂವರು ಕಬ್ಬಿಣದ ಸರಳಿನಿಂದ ಹೊಡೆದಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಖಂಡ್ವಾ ಪೊಲೀಸರು ಹೇಳಿದ್ದಾರೆ.