ಗದಗ: ‘ಕನಕದಾಸರು ಹಾಗೂ ಪುರಂದರದಾಸರು ಕರ್ನಾಟಕ ಸಂಗೀತ, ಕೀರ್ತನ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ’ ಎಂದು ಶಾಸ್ತ್ರೀಜಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ರಮೇಶ ಸಜ್ಜಗಾರ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಎಂ.ವಿ.ಮೂಲಿಮನಿ ಬಾಲಕಿಯರ ಪ್ರೌಢಶಾಲೆಯ ಸಹಯೋಗದಲ್ಲಿ ಇತ್ತೀಚೆಗೆ ನಗರದಲ್ಲಿ ನಡೆದ ಕಾಯಕ ರತ್ನ ಮೈಲಾರೆಪ್ಪ ಮೆಣಸಗಿ ಸ್ಮರಣಾರ್ಥ ‘ದಾಸ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ’ ಕುರಿತ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕನ್ನಡ ಸಾಹಿತ್ಯ ಪರಿಷತ್, ಶಾಲೆಯಲ್ಲಿ ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿ ಸಾಹಿತ್ಯಾಭಿಮಾನ ಬೆಳೆಸುವ ಕಾರ್ಯ ಮಾಡುತ್ತಿದೆ’ ಎಂದು ಮುಖ್ಯಶಿಕ್ಷಕಿ ಸರೋಜಿನಿ ಅಂಗಡಿ ಹೇಳಿದರು.
‘ಭೂಮಿ, ಭಾಷೆ, ತಂದೆ, ತಾಯಿಯನ್ನು ಗೌರವಿಸಬೇಕು. ಕನ್ನಡ ಭಾಷೆಯನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ಜತೆಗೆ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು’ ಎಂದು ಉದ್ಯಮಿ ಜಯದೇವ ಮೆಣಸಗಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
‘ಕಸಾಪ ನೂರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಕನ್ನಡಪರವಾದ ಹಾಗೂ ಮಕ್ಕಳ ಸಾಹಿತ್ಯಾಭಿರುಚಿ ಹೆಚ್ಚಿಸುವ ಶಾಲಾ ಸಾಹಿತ್ಯ ಕಲರವ, ದತ್ತಿ ಉಪನ್ಯಾಸ, ಸಿರಿಗನ್ನಡ ಜ್ಞಾನಕೋಶ ಲಿಖಿತ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಿ ಮಕ್ಕಳಲ್ಲಿ ಕನ್ನಡ ಭಾಷೆಯ ಕುರಿತು ಒಲವು ಹೆಚ್ಚಿಸುತ್ತಿದೆ’ ಎಂದು ಕಸಾಪ ಗೌರವ ಕಾರ್ಯದರ್ಶಿ ವಿವೇಕಾನಂದಗೌಡ ಪಾಟೀಲ ಹೇಳಿದರು.
ಶಿಕ್ಷಕ ಎಸ್.ಎಂ.ಉಮ್ಮಣ್ಣವರ, ಮಮತಾ ಎನ್, ಆರ್.ಆರ್.ಏಕಬೋಟೆ, ಎನ್.ವಿ.ಹುಚ್ಚಣ್ಣವರ, ಸಂಚಾಲಕ ಶಿವಾನಂದ ಗಿಡ್ನಂದಿ, ಜೀನತ್ ಡಂಬಳ ಇದ್ದರು. ಶಿಕ್ಷಕಿ ವಿಜಯಾ ಅಂಗಡಿ ಸ್ವಾಗತಿಸಿದರು. ಎನ್.ಎಚ್.ನಾಯಕವಾಡಿ ನಿರೂಪಿಸಿದರು. ಮಮತಾ ಎನ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.