ಧಾರವಾಡ: ಮುರುಘಾಮಠದ ಮುರುಘೇಂದ್ರ ಮಹಾಶಿವಯೋಗಿಗಳ ರಥೋತ್ಸವ ಸೋಮವಾರ ನೂರಾರು ಭಕ್ತರ ಹರ್ಷೋದ್ಗಾರಗಳ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.
ಸಂಜೆ 4.30ರ ಸುಮಾರಿಗೆ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ನವಲಗುಂದದ ಬಸವಲಿಂಗ ಸ್ವಾಮೀಜಿ, ಅಭಿನವ ಸ್ವಾಮೀಜಿ ಹಾಗೂ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
‘ಹರ... ಹರ... ಮಹಾದೇವ’ ಎಂದು ಜಯಘೋಷ ಜೋರಾಗಿತ್ತು. ಉತ್ತುತ್ತಿ, ನಿಂಬೆಹಣ್ಣು, ಬಾಳೆಹಣ್ಣು ತೂರಿ, ಭಕ್ತಿಯ ನಮನ ಸಲ್ಲಿಸಿದರು. ಹಣ್ಣು, ಕಾಯಿ ಅರ್ಪಿಸಿ ಧನ್ಯರಾದರು.
ಡೊಳ್ಳು ಕುಣಿತ, ಪುರವಂತರ ಕುಣಿತ, ಭಜನಾ ಮೇಳ, ಜಾಂಜ್ ಮೇಳದ ತಂಡಗಳು ಪಾಲ್ಗೊಂಡು ಜಾತ್ರೆಯ ಮೆರುಗು ಹೆಚ್ಚಿಸಿದವು. ನಗರ ಪ್ರದೇಶದ ಜನರೂ ಸೇರಿದಂತೆ ಸುತ್ತಲಿನ ಅಮ್ಮಿನಬಾವಿ, ಹೆಬ್ಬಳ್ಳಿ, ಶಿವಳ್ಳಿ, ಉಪ್ಪಿನ ಬೆಟಗೇರಿ, ಕರಡಿಗುಡ್ಡ ಸೇರಿದಂತೆ ಗ್ರಾಮೀಣ ಜನರೂ ಪಾಲ್ಗೊಂಡಿದ್ದರು.
ಭಕ್ತರಿಗೆ ಬೆಳಿಗ್ಗೆಯಿಂದಲೇ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಚುನಾವಣೆ ಸಮೀಪಿಸುತ್ತಿರುವುದರಿಂದ ರಥೋತ್ಸವದ ಹಾದಿಯುದ್ದಕ್ಕೂ ವಿವಿಧ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ಬ್ಯಾನರ್ಗಳ ಭರಾಟೆಯೂ ಜೋರಾಗಿತ್ತು.
ಆಟಿಕೆಗಳ ಅಂಗಡಿಗಳು, ತಿಂಡಿ, ತಿನಿಸುಗಳ ಅಂಗಡಿಗಳಲ್ಲಿ ಮಾರಾಟ ಭರಾಟೆ ಜೋರಾಗಿತ್ತು. ಮಕ್ಕಳಿಗಾಗಿ ಹಾಕಲಾಗಿರುವ ಮೋಜಿನ ಆಟದ ಮೇಳದಲ್ಲಿ ಜನರು ಆಟವಾಡಿ ಸಂಭ್ರಮಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಸವದತ್ತಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.