ಹಾಸನ: ವಾರದ ಹಿಂದೆ ಮಾರುಕಟ್ಟೆಯಲ್ಲಿ ಕೆ.ಜಿ. ₹ 80ಕ್ಕೆ ಮಾರಾಟ ಆಗುತ್ತಿದ್ದ ಕಿತ್ತಳೆ ಹಣ್ಣು, ಈ ವಾರ ₹ 60ಕ್ಕೆ ಇಳಿದಿದೆ. ಮಡಿಕೇರಿಯಿಂದ ಹಾಸನ ಮಾರುಕಟ್ಟೆಗೆ ಕಿತ್ತಳೆ ಹಣ್ಣು ಆಮದು ಆಗುತ್ತಿತ್ತು. ಪ್ರಸ್ತುತ ಹಣ್ಣಿನ ಕಾಲವಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವ ಕಾರಣ ಬೆಲೆ ಇಳಿಕೆಯಾಗಿದೆ.
‘ಇದೇ ರೀತಿ ಮಾರುಕಟ್ಟೆಗೆ ಹೆಚ್ಚು ಹಣ್ಣು ಬಂದರೆ ದರದಲ್ಲಿ ಮತ್ತಷ್ಟು ಇಳಿಕೆ ಆಗುವ ಸಾಧ್ಯತೆ ಇದೆ. ಬೇಡಿಕೆಗಿಂತ ಹೆಚ್ಚು ಹಣ್ಣು ಬರುತ್ತಿದೆ’ ಎಂದು ಹಣ್ಣಿನ ವ್ಯಾಪಾರಿ ಸಂಗಮೇಶ್ ಹೇಳಿದರು.
ಕಳೆದ ವಾರ ಕೆ.ಜಿ. ₹ 40 ಇದ್ದ ಅವರೆಕಾಯಿ, ಈ ವಾರ ₹ 30ಕ್ಕೆ ಮಾರಾಟವಾಗುತ್ತಿದೆ. ಹಾಸನದ ಮಾರುಕಟ್ಟೆಗೆ ಚನ್ನರಾಯಪಟ್ಟಣ, ಮೈಸೂರು, ಹಾಸನ ಸುತ್ತಮುತ್ತಲಿನ ಪ್ರದೇಶದಿಂದ ಅವರೆಕಾಯಿ ಹೆಚ್ಚು ಬರುತ್ತಿದ್ದು, ದರ ಕುಸಿದಿದೆ. ಇನ್ನು ₹ 10ಕ್ಕೆ ಒಂದೂವರೆ ಕೆ.ಜಿ. ಟೊಮೆಟೊ ಮಾರಾಟ
ವಾಗುತ್ತಿದ್ದು, ಬೆಲೆ ತುಸು ಏರಿಕೆಯಾಗಿದೆ. ಈರುಳ್ಳಿ ₹ 40ಕ್ಕೆ ಲಭ್ಯ ಇದ್ದು, ಯಾವುದೇ ವ್ಯತ್ಯಾಸವಾಗಿಲ್ಲ.