ಬೆಂಗಳೂರು: ‘ಮಹದಾಯಿ ಹೋರಾಟಕ್ಕೆ ಸಂಬಂಧಿಸಿದಂತೆ ಕನ್ನಡಪರ ಹೋರಾಟಗಾರರು ಇದೇ 25ರಂದು ಕರೆ ನೀಡಿರುವ ಕರ್ನಾಟಕ ಬಂದ್ ಹಿಂದೆ ರಾಜ್ಯ ಸರ್ಕಾರದ ಕುಮ್ಮಕ್ಕಿದೆ ಎಂದು ಆರೋಪಿಸಿರುವುದು ಬಿಜೆಪಿ ನಾಯಕರ ಅಜ್ಞಾನವನ್ನು ತೋರಿಸುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
‘ಕನ್ನಡಪರ ಸಂಘಟನೆಗಳ ನಾಯಕರಾದ ವಾಟಾಳ್ ನಾಗರಾಜ್ ನೆಲ, ಜಲ, ಭಾಷೆಗಾಗಿ ಮೊದಲಿನಿಂದಲೂ ಹೋರಾಟ ನಡೆಸಿದವರು. ಅದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿದರು.
ನೇತಾಜಿ ಸುಭಾಷ್ಚಂದ್ರ ಬೋಸ್ 121ನೇ ಜನ್ಮದಿನದ ಅಂಗವಾಗಿ ವಿಧಾನಸೌಧದ ಎದುರು ಇರುವ ನೇತಾಜಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
‘ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮದೇ ಆದ ಪ್ರತ್ಯೇಕ ಸೇನೆ ಕಟ್ಟಿ ಹೋರಾಟ ನಡೆಸಿದ್ದ ಸುಭಾಷ್ಚಂದ್ರ ಬೋಸ್, ಅಪ್ರತಿಮ ದೇಶಪ್ರೇಮಿಯಾಗಿ
ದ್ದರು’ ಎಂದು ಗುಣಗಾನ ಮಾಡಿದ ಮುಖ್ಯಮಂತ್ರಿ, ‘ಇಂತಹ ಮಹಾನ್ ನಾಯಕರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ’ ಎಂದರು.
‘ಸುಭಾಷ್ಚಂದ್ರ ಬೋಸ್ರ ಆದರ್ಶ, ಧ್ಯೇಯ, ಸಿದ್ಧಾಂತಗಳನ್ನು ಅನುಸರಿಸಿ ಸಮೃದ್ಧ ಭಾರತ ನಿರ್ಮಾಣಕ್ಕೆ ಕಂಕಣಬದ್ಧರಾಗಬೇಕು’ ಎಂಬ
ಪ್ರತಿಜ್ಞಾವಿಧಿಯನ್ನೂ ಮುಖ್ಯಮಂತ್ರಿ ಬೋಧಿಸಿದರು.
ಬಂದ್ಗೆ ಸಾರಿಗೆ ನಿಗಮ ಕಾರ್ಮಿಕರ ಬೆಂಬಲ
ಬೆಂಗಳೂರು: ಮಹದಾಯಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಇದೇ 25ರಂದು ಕರೆ ನೀಡಿರುವ ರಾಜ್ಯವ್ಯಾಪಿ ಬಂದ್ಗೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಬೆಂಬಲ ವ್ಯಕ್ತಪಡಿಸಿದೆ.
ಪುರಭವನದಿಂದ ಆರಂಭವಾಗುವ ಪ್ರತಿಭಟನಾ ಮೆರವಣಿಗೆಯಲ್ಲಿ ನಿಗಮದ ಕಾರ್ಮಿಕರು ಭಾಗವಹಿಸುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.