ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳಗುಪ್ಪ: ಕದಂಬರ ಕಾಲದ ಕುಲುಮೆ ಪತ್ತೆ

Last Updated 24 ಜನವರಿ 2018, 7:10 IST
ಅಕ್ಷರ ಗಾತ್ರ

ಶಿರಾಳಕೊಪ್ಪ: ಇತಿಹಾಸ ಪ್ರಸಿದ್ಧ ತಾಳಗುಂದ ಗ್ರಾಮದ ಪ್ರಣವೇಶ್ವರ ದೇವಾಲಯದ ಪೂರ್ವ ಭಾಗದ ಗದ್ದೆಯೊಂದರಲ್ಲಿ 4ನೇ ಶತಮಾನದ ಆಸುಪಾಸಿನದು ಎನ್ನಲಾದ ಕದಂಬರ ಕಾಲದ ಕುಂಬಾರ ಕುಲುಮೆಯ ಕಟ್ಟಡದ ರಚನೆ ಪತ್ತೆಯಾಗಿದೆ.

ಸ್ಥಳೀಯ ರೈತರು ಜೆಸಿಬಿಯಿಂದ ಗದ್ದೆಯನ್ನು ಸಮತಟ್ಟು ಮಾಡಿಸುವಾಗ ಈ ರಚನೆ ಪತ್ತೆಯಾಗಿದೆ. ತಕ್ಷಣ ಕೆಲಸ ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಬೃಹತ್ ಇಟ್ಟಿಗೆಗಳು ಕಂಡುಬಂದಿವೆ. ಮೊದಲು ಇದು ಯಜ್ಞಕುಂಡ ಎಂದೂ ಭಾವಿಸಲಾಗಿತ್ತು. ನಂತರ ಪ್ರಾಕ್ತನ ಶಾಸ್ತ್ರಜ್ಞರಾದ ಕೇಶವ ತಿರುಮಲೈ ಅವರು, ‘ಪತ್ತೆಯಾಗಿರುವ ರಚನೆಯು ಕದಂಬರ ಕಾಲದ ಕುಂಬಾರನ ಕುಲುಮೆ ಆಗಿರಬಹುದು’ ಎಂದು ಅಂದಾಜಿಸಿದ್ದಾರೆ.

ಕಟ್ಟಡದ ಮೇಲ್ಭಾಗದಲ್ಲಿ 6 ಅಡಿ ಅಳತೆಯ ವೃತ್ತಾಕಾರದ ರಚನೆಯಿದ್ದು, ಕೆಳಭಾಗದಲ್ಲಿ 3 ಅಡಿ ಸುತ್ತಳತೆಯಿದೆ. 8 ಅಡಿ ಎತ್ತರದ ಇಟ್ಟಿಗೆಯ ರಚನೆ ಇದಾಗಿದೆ.

ಈ ಭಾಗದಲ್ಲಿ ಕದಂಬಪೂರ್ವ ಕಾಲದ ಜನವಸತಿ ಸಂಕೀರ್ಣಯಿರುವ ಸಾಧ್ಯತೆಗೆ ಸಾಕ್ಷಿ ಲಭಿಸಿದಂತಾಗಿದ್ದು, ಇದೇ ಸ್ಥಳದಲ್ಲಿ ಮಣ್ಣಿನಿಂದ ಮಾಡಿದ ಪಾನ ಬಟ್ಟಲು ಮೂಲ ಸ್ವರೂಪದಲ್ಲಿ ಲಭ್ಯವಾಗಿದೆ. 1600 ವರ್ಷಗಳ ಹಿಂದಿನ ಮಡಿಕೆ ಚೂರುಗಳು ಹಾಗೂ ಇತರೆ ಪರಿಕರಗಳನ್ನೂ ಕಾಣಬಹುದು ಎಂದು ಇತಿಹಾಸ ಅಕಾಡೆಮಿ ಸದಸ್ಯ ರಮೇಶ್ ಹಿರೇಜಂಬೂರು ಹೇಳಿದರು.

ಸ್ಥಳದಲ್ಲಿ ಹೊಲದ ಮಾಲೀಕ ಮಾಳಗೊಂಡಕೊಪ್ಪ ರಾಯರು, ಪರಮೇಶ್, ಚಂದ್ರಶೇಖರ್ ಹಾಗೂ ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಎಂ.ನವೀನ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT