ಕಾರಟಗಿ: ಯುವಕರು ದೇಶದ ರಕ್ಷಣೆಗೆ ಸೈನಿಕರಂತೆ ಸಿದ್ಧರಾಗಿರಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ರಾಜ್ಯ ಘಟಕದ ಸಹ ಕಾರ್ಯದರ್ಶಿ ರವಿಚಂದ್ರ ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಎಬಿವಿಪಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ವ್ಯಕ್ತಿಗಿಂತ ದೇಶ ಮುಖ್ಯ. ಸ್ವಾಮಿ ವಿವೇಕಾನಂದ, ಭಗತ್ಸಿಂಗ್, ಮದನಲಾಲ್ ಅವರ ಆದರ್ಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕು ಎಂದರು.
ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಮೋದ ಬಿ. ಎಂ. ಮಾತನಾಡಿ, ಮಹನೀಯರ ಇತಿಹಾಸ ಓದಿದರೆ ಸಾಲದು, ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಸಂಗಮೇಶ್ ಮಾತನಾಡಿದರು. ಎಬಿವಿಪಿ ತಾಲ್ಲೂಕು ಘಟಕದ ಸಂಚಾಲಕ ಪಂಪನಗೌಡ ಜಂತಗಲ್ ವೇದಿಕೆಯಲ್ಲಿ ಇದ್ದರು. ಉಪನ್ಯಾಸಕ ರಾಮಾಂಜನೇಯ ಹಡಪದ ಕಾರ್ಯಕ್ರಮ ನಿರ್ವಹಿಸಿದರು.
ಎಬಿವಿಪಿಯಿಂದ ವಿದ್ಯಾಭಾರತಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮ ನಡೆಯಿತು. ಪ್ರಾಚಾರ್ಯ ಹುಸೇನ್ಭಾಷಾ, ಉಪನ್ಯಾಸಕರಾದ ಜೀವರಾಜ್, ಮಾಧವಿ ದೇಸಾಯಿ, ಆಶಾ ಸೋಮನಾಥ, ಡಾ. ಪಂಪಾತಿ ಸಿಂಧನೂರ ಇದ್ದರು.