ವಿಜಯಪುರ: ‘ವಾಟಾಳ್ ನಾಗರಾಜ್ ಯಾರ ಮಾತ್ ಕೇಳ್ತಾರ್ರೀ... ಅವರು ಒನ್ ಮ್ಯಾನ್ ಆರ್ಮಿ. ಒಮ್ಮೆ ಘೋಷಿಸಿದ ಮೇಲೆ ಮುಗೀತು, ನಿರ್ಧಾರ ಬದಲಿಸಲ್ಲ. ಕೊನೆಗೆ ಏಕಾಂಗಿ ಆದ್ರೂ, ತಾವು ಹೇಳಿದ್ದನ್ನ ಮಾಡ್ತಾರೆ... ಇದು ಅವರ ಜಾಯಮಾನ...’
‘ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಭೆಗೆ ಅಡ್ಡಿಪಡಿಸಲು ರಾಜ್ಯ ಸರ್ಕಾರ ಪರೋಕ್ಷವಾಗಿ ಕರ್ನಾಟಕ ಬಂದ್ಗೆ ಬೆಂಬಲ ನೀಡಿದೆಯಂತಲ್ಲಾ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರನ್ನು ಇಲ್ಲಿನ ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ, ಅವರು ಕೊಟ್ಟ ಉತ್ತರವಿದು.
‘ವಾಟಾಳ್ ನಾಗರಾಜ್ ಅವರನ್ನ ಯಾರಾದ್ರೂ ಕಂಟ್ರೋಲ್ ಮಾಡೋಕೆ ಸಾಧ್ಯವೇನ್ರೀ. ಅವರು ಯಾರ ಕಂಟ್ರೋಲ್ನಲ್ಲೂ ಇಲ್ಲ. ನಮ್ಮ ಮಾತನ್ನು ಯಾವತ್ತೂ ಕೇಳಿಲ್ಲ. ಫೆ. 4ಕ್ಕೆ ಬಂದ್ ಮಾಡಬ್ಯಾಡ್ರೀ ಅಂತ ನೀವಾದ್ರೂ ಹೇಳ್ರೀ. ನಿಮ್ ಮಾತನ್ನಾದ್ರೂ ಕೇಳಿ ಅವರು ಬಂದ್ ಮಾಡದಂಗಿರಲಿ’ ಎಂದು ಎಂ.ಬಿ.ಪಾಟೀಲ ಹೇಳುತ್ತಿದ್ದಂತೆ ಗೋಷ್ಠಿ ನಗೆಗಡಲಲ್ಲಿ ತೇಲಿತು.
‘ಆದ್ರೂ, ಬಂದ್ಗಳು ಈಗ ರಾಜಕೀಯ ಬಣ್ಣ ಪಡೆಯುತ್ತಿವೆಯಲ್ಲಾ’ ಎಂಬ ಪತ್ರಕರ್ತರ ಮರು ಪ್ರಶ್ನೆಗೆ, ಇದಕ್ಕೆಲ್ಲಾ ‘ಅಮಿತ್ ಶಾ ನೇತೃತ್ವದ ಮಹಾ ನಾಟಕ ಕಂಪನಿಯೇ ಕಾರಣ. ಯಡಿಯೂರಪ್ಪನವರೇ ಇದಕ್ಕೆ ಉತ್ತರಿಸಬೇಕು’ ಎಂದು
ವ್ಯಂಗ್ಯವಾಡಿದರು.