ಹಿರಿಯಡಕ: ಆಹಾರ ಅರಸುತ್ತ ಬಂದ ಚಿರತೆಯೊಂದು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಪೆರ್ಡೂರು ಸಮೀಪದ ಬೆಳ್ಳರ್ಪಾಡಿಯ ಸುತ್ತುಬಲ್ಲೆ ಎಂಬಲ್ಲಿ ಸೋಮವಾರ ಬೆಳಕಿಗೆ ಬಂದಿದೆ.
ಆಹಾರ ಅರಸುತ್ತ ಬಂದ 2 ವರ್ಷ ಪ್ರಾಯದ ಗಂಡು ಚಿರತೆಯು ಸುತ್ತುಬಲ್ಲೆಯ ಸತೀಶ್ ಕುಲಾಲ್ ಎಂಬುವವರ ಆವರಣವಿಲ್ಲದ ಬಾವಿಗೆ ಬಿದ್ದಿದೆ. ನೀರು ತುಂಬಿದ್ದ ಬಾವಿಯಿಂದ ಮೇಲೆ ಬರಲಾಗದೆ ಚಿರತೆ ಸಾವನ್ನಪ್ಪಿದ್ದು, ಚಿರತೆಯ ಮೃತದೇಹವನ್ನು ಕಂಡು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯರ ಸಹಕಾರದಿಂದ ಚಿರತೆಯ ಮೃತದೇಹವನ್ನು ಬಾವಿಯಿಂದ ಮೇಲಕ್ಕೆ ಎತ್ತಿದ್ದಾರೆ. ಹಿರಿಯಡಕದ ಪಶುವೈದ್ಯಾಧಿಕಾರಿ ಉದಯ್ ಕುಮಾರ್ ಶೆಟ್ಟಿ ಅವರು ಮರಣೋತ್ತರ ಪರೀಕ್ಷೆ ನಡೆಸಿದರು. ಅರಣ್ಯ ಇಲಾಖಾಧಿಕಾರಿಗಳು ಪ್ರಾಥಮಿಕ ತನಿಖೆಯನ್ನು ನಡೆಸಿದ ಬಳಿಕ ಚಿರತೆಯ ಮೃತದೇಹವನ್ನು ದಫನ ಮಾಡಲಾಯಿತು.
ಮೂಡುಬಿದಿರೆ ಉಪವಿಭಾಗದ ಎಸಿಎಫ್ ಸುಬ್ರಹ್ಮಣ್ಯ, ಆರ್ಎಫ್ಒ ಸುಬ್ರಹ್ಮಣ್ಯ ಆಚಾರ್, ಡಿಆರ್ಎಫ್ಒ ಕರುಣಾಕರ ಜೆ. ಆಚಾರ್ಯ ಪೆರ್ಡೂರು, ಇಲಾಖಾ ಸಿಬ್ಬಂದಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.