ಸಂಡೂರು: ಕಾರ್ಮಿಕರಿಗೆ ಉದ್ಯೋಗ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಗಣಿ ಕಾರ್ಮಿಕ ಸಂಘ ಕರೆ ನೀಡಿದ್ದ ಸಂಡೂರು ಬಂದ್ಗೆ ಮಂಗಳವಾರ ಉತ್ತಮ ಪ್ರತಿಕ್ರಿಯೆ ದೊರೆಯಿತು.
ಬಂದ್ ಪ್ರಯುಕ್ತ ಅದಿರು ಸಾಗಣೆ ಲಾರಿ, ಪ್ರಯಾಣಿಕರ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಶಾಲಾ ಕಾಲೇಜುಗಳು, ಅಂಗಡಿ ಮುಂಗಟ್ಟುಗಳು, ಹೋಟೆಲ್ಗಳು ಬಂದ್ ಆಗಿದ್ದವು.
ಗಣಿ ಪ್ರದೇಶ, ಕಾರ್ಖಾನೆ, ಶಾಲಾ ಕಾಲೇಜುಗಳು ಹಾಗೂ ಪರಸ್ಥಳಗಳಿಗೆ ಹೋಗಲೆಂದು ನಿಲ್ದಾಣಕ್ಕೆ ಬಂದಿದ್ದ ಕಾರ್ಮಿಕರು, ಸಾರ್ವಜನಿಕರು, ವಿದ್ಯಾರ್ಥಿಗಳು ಮನೆಗಳಿಗೆ ತೆರಳಿದರು.
ಪಟ್ಟಣದ ವಿಜಯವೃತ್ತದಲ್ಲಿ ನಡೆದ ಕಾರ್ಮಿಕರ ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆರ್. ಮಾನಸಯ್ಯ, ‘ಕೇಂದ್ರ ಸರ್ಕಾರ ಹಾಗೂ ಅಕ್ರಮ ಗಣಿಗಾರಿಕೆಯ ವಿರುದ್ಧ ತೊಡೆ ತಟ್ಟಿ ಪಾದಯಾತ್ರೆ ನಡೆಸಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕಾರ್ಮಿಕ –ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. 2011ರಲ್ಲಿ ಗಣಿಗಾರಿಕೆ ನಿಷೇಧಗೊಂಡ ನಂತರ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸರ್ಕಾರ ಕ್ರಮ ಕೈಗೊಂಡಿಲ್ಲ’ ಎಂದರು.