ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡು, ಭಾಷೆ ಒಗ್ಗೂಡಿಸುವ ರಂಗಭೂಮಿ: ಆಲ್ದಾಳ

Last Updated 2 ಫೆಬ್ರುವರಿ 2018, 8:40 IST
ಅಕ್ಷರ ಗಾತ್ರ

ಕಲಬುರ್ಗಿ: ’ರಂಗಭೂಮಿಯು ಜಾತಿಯ ಗೋಡೆಗಳನ್ನು ನೆಲಸಮ ಮಾಡಿ ಒಡೆದ ಮನಸ್ಸುಗಳನ್ನು ಒಗ್ಗೂಡಿಸುತ್ತದೆ’ ಎಂದು ಹಿರಿಯ ರಂಗಕರ್ಮಿ
ಎಲ್‌.ಬಿ.ಕೆ. ಆಲ್ದಾಳ ಹೇಳಿದರು.

ಇಲ್ಲಿನ ಎಸ್‌.ಎಂ.ಪಂಡಿತ್ ರಂಗಮಂದಿರದಲ್ಲಿ ಕಲಬುರ್ಗಿ ರಂಗಾಯಣವು ಹಮ್ಮಿಕೊಂಡಿರುವ ಎರಡು ದಿನಗಳ ಕಾಲೇಜು ರಂಗೋತ್ಸವಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಭಾಷೆ ಹಾಗೂ ಹಿರಿಯರನ್ನು ಗೌರವಿಸುವ ಗುಣಗಳನ್ನು ರಂಗಭೂಮಿ ಕಲಿಸುತ್ತದೆ. ಇದರ ಪ್ರಭಾವದಿಂದ ಸಮೃದ್ಧ ನಾಡು ಕಟ್ಟಬಹುದು’ ಎಂದು ಬಣ್ಣಿಸಿದರು.

’ಗಾಂಧೀಜಿಗೆ ಸತ್ಯದರ್ಶನ ಮಾಡಿಸಿದ್ದೇ ಸತ್ಯಹರಿಶ್ಚಂದ್ರ ನಾಟಕ. ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜೆ.ಜಯಲಲಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ, ಕಲಾವಿದೆ ಬಿ.ಜಯಶ್ರೀ ಅವರು ರಂಗಭೂಮಿಯ ಮೂಲಕವೇ ರಾಜಕೀಯ ಪ್ರವೇಶ ಮಾಡಿದವರು. ಈ ಕ್ಷೇತ್ರವು ಬಹುಮುಖಿ ವ್ಯಕ್ತಿತ್ವದ ಜನರನ್ನು ರೂಪಿಸುತ್ತದೆ’ ಎಂದು ಅವರು ತಿಳಿಸಿದರು.

‘ಇತರ ಕ್ಷೇತ್ರಗಳಿಗೆ ರಂಗಭೂಮಿಯ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳು ಕಾಲೇಜು ದಿನಗಳಲ್ಲಿ ರಂಗಭೂಮಿಯ ನಂಟು ಬೆಳೆಸಿಕೊಳ್ಳಬೇಕು’ ಎಂದರು.

’ಸೃಜನಶೀಲ ಕಲೆಗಳು ಬಿಕ್ಕಟ್ಟಿನ ಸ್ಥಿತಿಯಲ್ಲಿವೆ. ಬಯಲಾಟವನ್ನು ನಾಟಕ ನುಂಗಿತು. ನಾಟಕವನ್ನು ಟಿ.ವಿ., ಟಿ.ವಿ. ಯನ್ನು ಮೊಬೈಲ್‌ ನುಂಗಿಹಾಕಿದೆ. ಸದಭಿರುಚಿಯ ನಾಟಕಗಳ ಮೂಲಕ ರಂಗಭೂಮಿಗೆ ಪುನಶ್ಚೇತನ ನೀಡಬೇಕಾಗಿದೆ’ ಎಂದು ಸಲಹೆ ನೀಡಿದರು.

ರಂಗಕರ್ಮಿ ಸುಜಾತಾ ಜಂಗಮಶೆಟ್ಟಿ ಮಾತನಾಡಿ, ‘ಹೊಸ ನೀರು ಬಂದರೆ ರಂಗಭೂಮಿ ಉಳಿಯಲಿದೆ. ರಂಗ ನಟರು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಯಶಸ್ವಿಯಾದ ಸಾಕಷ್ಟು ನಿದರ್ಶನಗಳಿವೆ. ಈ ಪರಂಪರೆ ಮುಂದುವರಿಯಬೇಕು’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದತ್ತಪ್ಪ ಸಾಗನೂರು ಮಾತನಾಡಿದರು. ಹಿರಿಯ ರಂಗಕರ್ಮಿ ಶೋಭಾ ರಂಜೋಳಕರ್ ಇದ್ದರು. ಶಾಂತವೀರಯ್ಯ ಮಠಪತಿ ಸ್ವಾಗತಿಸಿದರು.

ಒಂದೇ ವೇದಿಕೆ, ಎರಡು ಕಾರ್ಯಕ್ರಮ

ಎಸ್‌.ಎಂ.ಪಂಡಿತ್ ರಂಗಮಂದಿರದಲ್ಲಿ ಗುರುವಾರ ಒಂದೇ ಸಮಯದಲ್ಲಿ ಎರಡು ಕಾರ್ಯಕ್ರಮಗಳು. ಎರಡೂ ಕಾರ್ಯಕ್ರಮಗಳನ್ನೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಸಂಘಟಿಸಿತ್ತು!

ಬೆಳಿಗ್ಗೆ 10 ಗಂಟೆಗೆ ರಂಗಾಯಣದ ಕಾಲೇಜು ರಂಗೋತ್ಸವ, ಬೆಳಿಗ್ಗೆ 11.30ಕ್ಕೆ ಮಡಿವಾಳ ಮಾಚಿದೇವರ ಜಯಂತಿ ನಿಗದಿಯಾಗಿತ್ತು. ಒಂದೂವರೆ ತಾಸಿನ ಅಂತರದಲ್ಲಿ ಎರಡು ಕಾರ್ಯಕ್ರಮಗಳು ನಡೆಯಬೇಕಾಗಿದ್ದವು. ಆದರೆ, ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಉದ್ಘಾಟಿಸಬೇಕಾಗಿದ್ದ ಜಯಂತಿಯೇ ಮೊದಲು ನಡೆಯಿತು. ಇದರಿಂದ ಕಾಲೇಜು ರಂಗೋತ್ಸವದಲ್ಲಿ ನಾಟಕ ಪ್ರದರ್ಶಿಸಲು ಸಿದ್ಧವಾಗಿ ಬಂದಿದ್ದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸಾಯಂಕಾಲ 4 ಗಂಟೆ ವರೆಗೂ ಕಾಯಬೇಕಾಯಿತು.

‘ಸಾಕಷ್ಟು ಮೊದಲೇ ರಂಗಮಂದಿರ ಕಾದಿರಿಸಿದ್ದೆವು. ಆದರೆ, ನಮ್ಮ ಸಮಯಕ್ಕೆ ವೇದಿಕೆ ಸಿಗಲಿಲ್ಲ’ ಎಂದು ರಂಗಾಯಣ ನಿರ್ದೇಶಕ ಮಹೇಶ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಎಲ್‌ಬಿಕೆ ಅಸಮಾಧಾನ

ರಂಗಾಯಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯವೈಖರಿ ಬಗ್ಗೆ ಎಲ್‌.ಬಿ.ಕೆ. ಆಲ್ದಾಳ್‌ ಅಸಮಾಧಾನ ಹೊರಹಾಕಿದರು. ‘ನನಗೆ ತಿಳಿಸದೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸಲಾಗಿದೆ. ಸಮಾರಂಭದ ದಿನಾಂಕ, ಸಮಯ ಎರಡನ್ನೂ ಮೊದಲೇ ತಿಳಿಸಿರಲಿಲ್ಲ. ಬುಧವಾರ ಕರೆ ಮಾಡಿ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿದರು. 132 ಕಿ.ಮೀ ದೂರದ ನಮ್ಮ ಊರಿನಲ್ಲಿದ್ದ ನಾನು ತರಾತುರಿಯಲ್ಲಿ ಹೇಗೆ ಬರಲಿ? ಎಂದು ಪ್ರಶ್ನಿಸಿದರು.

‘ಹಿರಿಯ ರಂಗಕರ್ಮಿಯನ್ನು ನಡೆಸಿಕೊಳ್ಳುವ ಪರಿ ಇದಲ್ಲ. ಸಂಘಟಕರ ಬೇಜವಾಬ್ದಾರಿ ಬೇಸರ ಉಂಟು ಮಾಡಿದೆ. ರಂಗಾಯಣದ ಚಟುವಟಿಕೆಗಳು ಜನರ ಬಾಯಿಯಲ್ಲಿ ಟೀಕೆಗೆ ಒಳಗಾಗುವ ಮೊದಲೇ ತಿದ್ದಿಕೊಂಡು ಮುನ್ನಡೆಯಬೇಕು’ ಎಂದು ಸಲಹೆ ನೀಡಿದರು.

ಎಲ್‌.ಬಿ.ಕೆ. ಆಲ್ದಾಳ ಅಸಮಾಧಾನ

ರಂಗಾಯಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯವೈಖರಿ ಬಗ್ಗೆ ಎಲ್‌.ಬಿ.ಕೆ. ಆಲ್ದಾಳ್‌ ಅಸಮಾಧಾನ ಹೊರಹಾಕಿದರು. ‘ನನಗೆ ತಿಳಿಸದೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸಲಾಗಿದೆ. ಸಮಾರಂಭದ ದಿನಾಂಕ, ಸಮಯ ಎರಡನ್ನೂ ಮೊದಲೇ ತಿಳಿಸಿರಲಿಲ್ಲ. ಬುಧವಾರ ಕರೆ ಮಾಡಿ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿದರು. 132 ಕಿ.ಮೀ ದೂರದ ನಮ್ಮ ಊರಿನಲ್ಲಿದ್ದ ನಾನು ತರಾತುರಿಯಲ್ಲಿ ಹೇಗೆ ಬರಲಿ? ಎಂದು ಪ್ರಶ್ನಿಸಿದರು.

‘ಹಿರಿಯ ರಂಗಕರ್ಮಿಯನ್ನು ನಡೆಸಿಕೊಳ್ಳುವ ಪರಿ ಇದಲ್ಲ. ಸಂಘಟಕರ ಬೇಜವಾಬ್ದಾರಿ ಬೇಸರ ಉಂಟು ಮಾಡಿದೆ. ರಂಗಾಯಣದ ಚಟುವಟಿಕೆಗಳು ಜನರ ಬಾಯಿಯಲ್ಲಿ ಟೀಕೆಗೆ ಒಳಗಾಗುವ ಮೊದಲೇ ತಿದ್ದಿಕೊಂಡು ಮುನ್ನಡೆಯಬೇಕು’ ಎಂದು ಸಲಹೆ ನೀಡಿದರು.

* * 

ಸಂವಹನ ಕೊರತೆಯಿಂದ ಕಾಲೇಜು ರಂಗೋತ್ಸವ ಆಯೋಜನೆಯಲ್ಲಿ ಕೆಲವು ಲೋಪಗಳಾಗಿವೆ. ಈ ಬಗ್ಗೆ ರಂಗಕರ್ಮಿಗಳ ಕ್ಷಮೆ ಕೋರುವೆ.
ಮಹೇಶ ವಿ ಪಾಟೀಲ
ನಿರ್ದೇಶಕ, ಕಲಬುರ್ಗಿ ರಂಗಾಯಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT