ಕಲಾದಗಿ: ಮಳೆಗೆ ಕೊಚ್ಚಿ ಹೋಗಿದ್ದ ಸ್ಥಳೀಯ ಸಂಶಿ ಕ್ರಾಸ್ನಿಂದ ಕಲಾದಗಿ ಗ್ರಾಮಕ್ಕೆ ಬರುವ ಮುಖ್ಯ ರಸ್ತೆಯ ಸೇತುವೆಯನ್ನು ಕೂಡಲೇ ಪುನರ್ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಹೆರಕಲ್ ದಕ್ಷಿಣ ಏತ ನೀರಾವರಿ ಜಾಕವೆಲ್ಗೆ ನಿರ್ಮಿಸಲಾಗಿದ್ದ ಸೇತುವೆ ಕಳೆದ ಜೂನ್- 6 ರಂದು ಸುರಿದ ಭಾರಿ ಮಳೆಗೆ ಕೊಚ್ಚಿ ಹೋಗಿತ್ತು. ಇದರಿಂದ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿತ್ತು. ಆದಷ್ಟು ಬೇಗ ಸೇತುವೆ ನಿರ್ಮಿಸಿ ಸಂಚಾರ ಪುನರ್ ಆರಂಭಿಸುವಂತೆ ರೈತ ಮಲ್ಲಯ್ಯ ಗಣಾಚಾರಿ ಆಗ್ರಹಿಸುತ್ತಾರೆ.
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕೈಗೊಂಡದ್ದ ಹೆರಕಲ್ ದಕ್ಷಿಣ ಏತ ನೀರಾವರಿ ಕಾಲುವೆ ಕಾಮಗಾರಿ ಪೂರ್ಣಗೊಂಡ ವರ್ಷದ ಒಳಗೆ ಸಂಪೂರ್ಣ ಹಾಳಾಗಿ ಹೋಗಿದೆ. ಕಳೆದ ಎರಡು ಮೂರು ದಿನಗಳಿಂದ ಕಾಲುವೆಯಲ್ಲಿ ನೀರು ಸರಿದಿದ್ದು, ವಾಹನ ಸವಾರರು ಹರಸಾಹಸ ಪಡುವ ದೃಶ್ಯ ಕಂಡುಬಂದಿತು.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಈ ಭಾಗದ ಶಾಸಕರು ಸೇತುವೆ ನಿರ್ಮಾಣಕ್ಕೆ ಗಮನ ಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.