ಚಿಕ್ಕಮಗಳೂರು: ‘ರಕ್ತದಾನ ಮಾಡಲು ಯುವಪೀಳಿಗೆಗೆ ಹಿಂಜರಿಯಬಾರದು. ರಕ್ತದಾನ ಮಾಡಿ, ಜೀವ ಉಳಿಸಬೇಕು ಎಂದು ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಮುಖಂಡ ಡಾ.ಕೆ.ಸುಂದರಗೌಡ ಸಲಹೆ ನೀಡಿದರು.
ಯುವ ರೆಡ್ಕ್ರಾಸ್ ಜಿಲ್ಲಾ ಘಟಕದ ವತಿಯಿಂದ ನಗರದ ಐಡಿಎಸ್ಜಿ ಸರ್ಕಾರಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಮತ್ತು ರಕ್ತದಾನದ ಮಹತ್ವದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ರಕ್ತದಾನ ಮಾಡಲು ಭಯಪಡ ಬಾರದು. ಮನುಷ್ಯನದ ದೇಹದಲ್ಲಿ ಸುಮಾರು 5ಲೀಟರ್ ರಕ್ತ ಇರುತ್ತದೆ. ಅದರಲ್ಲಿ 300 ಮಿಲಿ ಲೀಟರ್ ರಕ್ತದಾನ ಮಾಡಬಹುದು. ರಕ್ತ ಮತ್ತೆ ಉತ್ಪಾದನೆಯಾಗುತ್ತದೆ. ರಕ್ತದಾನ ಮಾಡುವುದು ಮಾನವೀಯ ಸೇವೆ ಎಂದು ಹೇಳಿದರು.
ರಾಜ್ಯದಲ್ಲಿ ನಿತ್ಯ ಒಂದು ಸಾವಿರ ಯೂನಿಟ್ ರಕ್ತದ ಅವಶ್ಯಕತೆ ಇರುತ್ತದೆ. ಪ್ರಸ್ತುತ 800 ಯೂನಿಟ್ ರಕ್ತ ಲಭ್ಯವಾಗುತ್ತಿದೆ. ಸಾಮಾಜಿಕ ಕಾಳಜಿ, ಸೇವಾಮನೋಭಾವವನ್ನು ಯುವ ಜನರು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಪ್ರೊ.ಟಿ.ಸಿ.ಬಸವ ರಾಜು ಮಾತನಾಡಿ, ರಕ್ತದಾನ ಜೀವದಾನಕ್ಕೆ ಸಮವಾದುದು. ಹಸಿದ ವರಿಗೆ ಆಹಾರ, ಮಕ್ಕಳಿಗೆ ಶಿಕ್ಷಣ, ಅಗತ್ಯವಿರುವವರಿಗೆ ರಕ್ತದಾನ ಮಾಡುವುದು ಮಾನವೀಯತೆ. ನಿಯ ಮಿತವಾಗಿ ರಕ್ತದಾನ ಮಾಡುವುದನ್ನು ಯುವಸಮೂಹ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಯುವರೆಡ್ಕ್ರಾಸ್ ಘಟಕದ ಮುಖಂಡ ಈ.ಶ್ರೀನಿವಾಸ್ ಮಾತನಾಡಿ, ರಕ್ತ ಪಡೆಯುವುದಕ್ಕೂ ಮುನ್ನ ದಾನಿಯ ತೂಕ, ರಕ್ತದ ಒತ್ತಡ(ಬಿ.ಪಿ), ಆರೋಗ್ಯ ಸ್ಥಿತಿ ಪರೀಕ್ಷಿಸಲಾಗುವುದು. ಈ ಶಿಬಿರದಲ್ಲಿ 200 ಯೂನಿಟ್ ರಕ್ತ ಸಂಗ್ರಹವಾಗುವ ನಿರೀಕ್ಷೆ ಇದೆ. ದಾನಿಗಳಿಂದ ಪಡೆದ ರಕ್ತವನ್ನು ರೆಡ್ಕ್ರಾಸ್ ಸಂಸ್ಥೆಯ ರಕ್ತನಿಧಿಯಲ್ಲಿ ಸಂಗ್ರಹಿಸಿಟ್ಟು ಅಗತ್ಯ ಇರುವವರಿಗೆ ವಿತರಿಸಲಾಗವುದು ಎಂದು ಅವರು ಹೇಳಿದರು.
ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ ಮಾತನಾಡಿದರು. ರೆಡ್ಕ್ರಾಸ್ ಸಂಸ್ಥೆ ರಾಜ್ಯ ಘಟಕದ ವೈದ್ಯಾಧಿಕಾರಿ ಡಾ.ಶ್ರೀಧರ್ಬಾಬು, ಉಪನ್ಯಾಸಕ ಪ್ರೊ.ಎಂ.ಸಿ.ಮೋಕ್ಷ, ಲಯನ್ಸ್ ಸಂಸ್ಥೆ ಜಿಲ್ಲಾಘಟಕದ ಕಾರ್ಯದರ್ಶಿ ಕೀರ್ತಿ ಇದ್ದರು.
* *
‘ಪ್ರತಿಯೊಬ್ಬರು ತಮ್ಮ ರಕ್ತದ ಗುಂಪಿನ ಮಾದರಿ ಬಗ್ಗೆ ತಿಳಿದುಕೊಳ್ಳಬೇಕು. ರಕ್ತದ ಗುಂಪಿನ ಮಾದರಿಯನ್ನು ಗುರುತಿನ ಚೀಟಿಯಲ್ಲಿ ನಮೂದಿಸಿಕೊಳ್ಳಬೇಕು.
ಬಿ.ತಿಪ್ಪೇರುದ್ರಪ್ಪ, ಉಪನ್ಯಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.