ಹೊಸಪೇಟೆ: ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಗುರುವಾರ ಕಾರ್ ಹುಣ್ಣಿಮೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ರೈತಾಪಿ ಜನ ತಮ್ಮ ಎತ್ತುಗಳಿಗೆ ಸ್ನಾನ ಮಾಡಿಸಿ, ಕೊಡುಗಳಿಗೆ ಬಣ್ಣ ಬಳಿದು, ಗೆಜ್ಜೆ ಕಟ್ಟಿ, ಹೂಗಳಿಂದ ಅಲಂಕರಿಸಿದರು. ಎತ್ತಿನ ಬಂಡಿಗಳನ್ನು ಕೂಡ ಅಲಂಕರಿಸಿ ಪೂಜೆ ಮಾಡಿದರು. ಮಹಿಳೆಯರು ಮಣ್ಣಿನಿಂದ ತಯಾರಿಸಿದ ಎತ್ತುಗಳಿಗೆ ಪೂಜೆ ಸಲ್ಲಿಸಿ, ಆರತಿ ಮಾಡಿದರು.
ಹಬ್ಬಕ್ಕಾಗಿ ತಯಾರಿಸಿದ ವಿಶೇಷ ಖಾದ್ಯಗಳನ್ನು ದೇವರು, ಎತ್ತುಗಳಿಗೆ ಸಮರ್ಪಿಸಿದ ಬಳಿಕ ಮನೆ ಮಂದಿ ಆಹಾರ ಸೇವಿಸಿದರು. ತಾಲ್ಲೂಕಿನ ವಡ್ಡರಹಳ್ಳಿ, ಬೈಲುವದ್ದಿಗೇರಿ, ಧರ್ಮಸಾಗರ, ಕಮಲಾಪುರ, ಕೊಂಡನಾಯಕನಹಳ್ಳಿ, ಮಲಪನಗುಡಿ, ಮರಿಯಮ್ಮನಹಳ್ಳಿ ಸೇರಿದಂತೆ ಹಲವೆಡೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.