ಭಾರತೀನಗರ: ಸಮೀಪದ ಕೊಕ್ಕರೆಬೆಳ್ಳೂರಿನಲ್ಲಿ ಕೊಕ್ಕರೆಗಳ ಸಾವಿನ ಸರಣಿ ಮುಂದುವರೆದಿದೆ. ಭಾನುವಾರ ಅಸ್ವಸ್ಥಗೊಂಡು ಮರದಿಂದ ಕೆಳಕ್ಕುರುಳಿದ್ದ 2 ಕೊಕ್ಕರೆಗಳು ಮೃತಪಟ್ಟಿವೆ. ಇದರಿಂದ ಇದುವರೆಗೆ ಕೊಕ್ಕರೆಗಳ ಸಾವಿನ ಸಂಖ್ಯೆ 23ಕ್ಕೇರಿದೆ. ಸೋಮವಾರ ಎರಡು ಮತ್ತು ಮಂಗಳವಾರ ಮತ್ತೆರಡು ಕೊಕ್ಕರೆಗಳು ಅಸ್ವಸ್ಥಗೊಂಡು ಮರದಿಂದ ಕೆಳಕ್ಕುರುಳಿವೆ.
ಅಸ್ವಸ್ಥಗೊಂಡಿರುವ 4 ಕೊಕ್ಕರೆಗಳನ್ನು ಪಶುವೈದ್ಯ ಡಾ.ಸತೀಶ್, ಹೆಜ್ಜಾರ್ಲೆ ಬಳಗದ ಅಧ್ಯಕ್ಷ ಬಿ.ಲಿಂಗೇಗೌಡ, ಅರಣ್ಯ ವೀಕ್ಷಕ ಲೋಕೇಶ್ ಅವರು ಪಕ್ಷಿ ಕೇಂದ್ರದಲ್ಲಿಟ್ಟು ಪೋಷಣೆ ಮಾಡುತ್ತಿದ್ದಾರೆ.
ಅಸ್ವಸ್ಥಗೊಂಡಿರುವ ಕೊಕ್ಕರೆಗಳು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ದಿನಗಳೆದಂತೆ ಅವು ಕೂಡ ಸಾವನ್ನಪ್ಪುವ ಸಾಧ್ಯತೆ ಹೆಚ್ಚು ಎಂದು ಹೆಜ್ಜಾರ್ಲೆ ಲಿಂಗೇಗೌಡ ಹೇಳಿದರು. ಇಂದು ಅಧಿಕಾರಿಗಳ ಭೇಟಿ: ಫೆ. 8ರಂದು ಅರಣ್ಯ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಹಿರಿಯ ಅಧಿಕಾರಿಗಳು ಕೊಕ್ಕರೆ ಬೆಳ್ಳೂರಿಗೆ ಭೇಟಿ ನೀಡಲಿದ್ದಾರೆ.