ದೊಡ್ಡಬಳ್ಳಾಪುರ: ನಗರದ ಹೊರವಲಯದ ಜವಹಾರ್ ನವೋದಯ ವಿದ್ಯಾಲಯದಲ್ಲಿ ನವೋದಯ ವಿದ್ಯಾಲಯ ಸಮಿತಿ ಹೈದರಾಬಾದ್ ವಲಯದ ವತಿಯಿಂದ ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ಘೋಷ ವಾಕ್ಯದಡಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಚಿತ್ರಕಲಾ ಸಮ್ಮೇಳನವನ್ನು ಹೈದರಾಬಾದ್ ವಲಯ ನವೋದಯ ವಿದ್ಯಾಲಯ ಸಮಿತಿ ಉಪ ಆಯುಕ್ತ ಎ.ವೈ.ರೆಡ್ಡಿ ಉದ್ಗಾಟಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ನವೋದಯ ವಿದ್ಯಾಲಯದ ಟಿ.ಗೋಪಾಲಕೃಷ್ಣ, ಹಲವು ಭಾಷೆ, ಸಂಸ್ಕೃತಿಗಳ ಸಮ್ಮಿಲನದ ಸಂಕೇತವಾಗಿ ನವೋದಯ ವಿದ್ಯಾಲಯಗಳು ಕೆಲಸ ಮಾಡುತ್ತಿವೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ರಾಷ್ಟ್ರೀಯ ಏಕತೆಯನ್ನು ಸಹಜವಾಗಿಯೇ ಕಲಿಯುತ್ತಾರೆ. ಇದನ್ನು ಮತ್ತಷ್ಟು ಗಟ್ಟಿಗೊಲಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಸಾಂಸ್ಕೃತಿಕ ಹಬ್ಬದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತೆಲಂಗಾಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬರ್, ಮಿನಿಕಾಯ್, ಪುದುಚೇರಿ, ಕಾರೈಕಲ್ಗಳಿಂದ 16 ಜವಹಾರ್ ನವೋದಯ ವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿವಿಧ ನವೋದಯ ವಿದ್ಯಾಲಯಗಳ ವಿದ್ಯಾರ್ಥಿಗಳು ಬಿಡಿಸಿದ್ದ ಚಿತ್ರಕಲಾ ಪ್ರದರ್ಶನ, ಸ್ಥಳೀಯ ಜಾನಪದ ನೃತ್ಯಗಳ ಪ್ರದರ್ಶನ ನಡೆಯಿತು. ಬೆಂಗಳೂರು ಚಿತ್ರಕಲಾ ಪರಿಷತ್ನ ಪ್ರಾಧ್ಯಾಪಕ ಡಾ.ಆರ್.ಎಚ್.ಕುಲಕರ್ಣಿ, ಜವಹಾರ್ಲಾಲ್ ನೆಹರು ವೈಜ್ಞಾನಿಕ ಸಂಶೋಧನಾ ಕೇಂದ್ರದ ಎ.ಎನ್.ಜಯಚಂದ್ರ ಪಾಲ್ಗೊಂಡಿದ್ದರು.