ಧಾರವಾಡ: ಇಲ್ಲಿನ ಕಡಪಾ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ ಗುರುವಾರ ರಾತ್ರಿ ಮರಗಳನ್ನು ಕಡಿದು ಹಾಕಿದ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದ ವಿರುದ್ಧ ಬಿಜೆಪಿ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಹಾಗೂ ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಅವರು, ಕಾನೂನು ಉಲ್ಲಂಘಿಸಿ ಮರಗಳನ್ನು ತೆರವುಗೊಳಿಸಲು ಸೂಚಿಸಿದ್ದಾರೆ. ಈ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವ ಮೂಲಕ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮರಗಳನ್ನು ತೆರವುಗೊಳಿಸಿದವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಆಗ್ರಹಿಸಿ, ಮರಗಳನ್ನು ಅಪ್ಪಿಕೊಂಡು ಪ್ರತಿಭಟಿಸಿದರು.
ಪಾಲಿಕೆ ಸದಸ್ಯ ಸಂಜಯ ಕಪಟಕರ ಮಾತನಾಡಿ, ಸಾರ್ವಜನಿಕ ಉದ್ದೇಶಕ್ಕೆ ಬಳಸಲು ನಾಗೇಂದ್ರ ಕಡಪಾ ಅವರು ಪಾಲಿಕೆಗೆ ಜಾಗವನ್ನು ದಾನವಾಗಿ ನೀಡಿದ್ದಾರೆ. ಅನ್ಯ ಉದ್ದೇಶಗಳಿಗೆ ಮೈದಾನವನ್ನು ಬಳಸಬಾರದು ಎಂದು ಪಾಲಿಕೆ ಠರಾವು ಮಾಡಿದೆ. ಆದರೂ ಆಯುಕ್ತರು ಏಕಾಏಕಿ ಮರಗಳನ್ನು ಕತ್ತರಿಸಿ ಇಂದಿರಾ ಕ್ಯಾಂಟೀನ್ಗೆ ಜಾಗೆ ನೀಡುತ್ತಿರುವುದು ಸರಿಯಲ್ಲ ಎಂದರು.
ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಸದಸ್ಯರಾದ ಶಂಕರ ಶೇಳಕೆ, ಬಲರಾಮ ಕುಸುಗಲ್, ಮುಖಂಡರಾದ ಸಂಗನಗೌಡ ರಾಮನಗೌಡ್ರ, ಶ್ರೀನಿವಾಸ ಕೋಟ್ಯಾನ್, ಶರಣು ಅಂಗಡಿ, ರಾಕೇಶ್ ನಾಝರೆ, ದೇವರಾಜ ಶಹಾಪುರ, ವಿಜಯ ಸಾಬಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.