ಮಲಾಪುರ: ‘ಸರ್ಕಾರ ತೊಗರಿ ಖರೀದಿ ಮಿತಿಯನ್ನು 3.5 ಲಕ್ಷ ಟನ್ಗೆ ಹೆಚ್ಚಿಸಬೇಕು’ ಎಂದು ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಒತ್ತಾಯಿಸಿದರು.
ತೊಗರಿ ಖರೀದಿ ಸ್ಥಗಿತ ಗೊಳಿಸಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಪ್ರಾಂತ ರೈತ ಸಂಘದಿಂದ ಪಟ್ಟಣದಲ್ಲಿ ನಡೆದ ಜಾಥಾದಲ್ಲಿ ಅವರು ಮಾತನಾಡಿದರು.
‘ಈ ಬಾರಿ ತೊಗರಿ ಇಳವರಿ ಜಾಸ್ತಿಯಾಗಿದೆ. ರಾಜ್ಯದಲ್ಲಿ 8 ಲಕ್ಷ ರೈತರು ತೊಗರಿ ಬೆಳೆದಿದ್ದಾರೆ. 3.15 ಲಕ್ಷ ರೈತರು ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿದ್ದಾರೆ. ಕೇವಲ 89 ಸಾವಿರ ರೈತರ ತೊಗರಿ ಖರೀದಿಯಾಗಿದೆ. ಸರ್ಕಾರ ನಿಗದಿ ಪಡಿಸಿರುವ 1.65 ಲಕ್ಷ ಟನ್ನಲ್ಲಿ 1.40 ಲಕ್ಷ ಟನ್ ಖರೀದಿ ಮಾಡಲಾಗಿದೆ. ಈಗ ಖರೀದಿ ಕೇಂದ್ ಸ್ಥಗಿತಗೊಳಿಸಲಾಗಿದ್ದು, ಬಾಕಿ ರೈತರಿಗೆ ಆತಂಕವಾಗಿದೆ’ ಎಂದರು.
ಪ್ರತಿ ಕ್ವಿಂಟಲ್ಗೆ ₹6 ಸಾವಿರ ಬೆಂಬಲ ಬೆಲೆಯನ್ನು ₹7500ಕ್ಕೆ ಹೆಚ್ಚಿಸಬೇಕು. ಬೇಳೆ ಕಾಳು ಆಮದು ಮೇಲೆ ಶೇ 30ರಷ್ಟು ತೆರಿಗೆ ವಿಧಿಸಬೇಕು. ಮತ್ತೆ ಖರೀದಿ ಪ್ರಕ್ರಿಯೆ ಆರಂಭಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ವಿಜಯಕುಮಾರ ಪಾಟೀಲ ರಟಕಲ್, ಬಾಬು ಹಿರಮಶೆಟ್ಟಿ, ವೀರಭದ್ರ ಕಲಬುರ್ಗಿ, ಹಣಮಂತ ಚಂದ್ರನಗರ ಇದ್ದರು.