ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿಯುವುದೇ ಕಾಂಗ್ರೆಸ್‌ ಪ್ರಾಬಲ್ಯ

ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರ: ಕೊಳೆಗೇರಿ ಪ್ರದೇಶವೇ ಹೆಚ್ಚು
ಅಕ್ಷರ ಗಾತ್ರ

ದಾವಣಗೆರೆ: ಮಧ್ಯ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ದಾವಣಗೆರೆ ವಿಧಾನಸಭಾ ಕ್ಷೇತ್ರವು ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಕಾರ್ಮಿಕರ ರೂಪದಲ್ಲಿ ಕಮ್ಯುನಿಸ್ಟ್‌ ಪಕ್ಷದ ದೊಡ್ಡ ಪಡೆಯನ್ನೇ ಹೊಂದಿದ್ದ ಈ ವಾಣಿಜ್ಯ ನಗರವು ಕ್ರಮೇಣ ಕಾಂಗ್ರೆಸ್‌ನ ಭದ್ರಕೋಟೆಯಾಗಿ ಪರಿವರ್ತನೆಯಾಗಿದೆ.

ಚಿತ್ರದುರ್ಗ ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿದ್ದ ದಾವಣಗೆರೆಯು ಜೆ.ಎಚ್.ಪಟೇಲ್‌ ಮುಖ್ಯಮಂತ್ರಿಯಾಗಿದ್ದಾಗ 1997ರಲ್ಲಿ ಸ್ವತಂತ್ರ ಜಿಲ್ಲೆಯಾಗಿ ಹೊರಹೊಮ್ಮಿತ್ತು. ನಂತರ ದಾವಣಗೆರೆಯಲ್ಲಿ ರಾಜಕೀಯ ಚಟುವಟಿಕೆಗಳು ಹೆಚ್ಚು ಬಿರುಸುಗೊಂಡವು.

ಚುನಾವಣೆಯ ಹಾದಿ: ವಿಧಾನಸಭಾ ಕ್ಷೇತ್ರ ವಿಂಗಡಣೆಯಾದ ನಂತರ ಮೈಸೂರು ರಾಜ್ಯ ಅವಧಿಯಲ್ಲಿ 1952ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಬಳ್ಳಾರಿ ಸಿದ್ದಮ್ಮ ದಾವಣಗೆರೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಬೋಂದಾಡಿ ಹನುಮಂತರಾವ್‌ ವಿರುದ್ಧ ಜಯಗಳಿಸಿದರು. ಇವರು ದಾವಣಗೆರೆ ವಿಧಾನಸಭಾ ಕ್ಷೇತ್ರದ ಪ್ರಥಮ ಮಹಿಳಾ ಅಭ್ಯರ್ಥಿ ಎಂದು ಮಾಹಿತಿ ನೀಡುತ್ತಾರೆ ಹಿರಿಯ ಪತ್ರಕರ್ತ ನಜೀರ್‌.

1957ರಲ್ಲಿ ನಡೆದ ಎರಡನೇ ಚುನಾವಣೆಯಲ್ಲಿ ಪ್ರಜಾ ಸೋಷಲಿಸ್ಟ್‌ ಪಕ್ಷದಿಂದ ಕೆ.ಟಿ.ಜಂಬಣ್ಣ ಅವರು ಗಾಂಜಿ ವೀರಪ್ಪ ಅವರ ವಿರುದ್ಧ ಜಯಗಳಿಸಿದರು. ಇದು ಪ್ರಜಾ ಸೋಷಿಯಲಿಸ್ಟ್‌ ಪಕ್ಷಕ್ಕೆ (ಪಿಎಸ್‌ಪಿ) ದೊರೆತ ಮೊದಲ ಜಯವಾಗಿತ್ತು.

1972ರಲ್ಲಿ ನಡೆದ ಚುನಾವಣೆ ಯಲ್ಲಿ ಸಿ.ನಾಗಮ್ಮ ಕೇಶವಮೂರ್ತಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಷಿಯ ಲಿಸ್ಟ್‌ ಪಕ್ಷದ ಕೆ.ಜಿ.ಮಹೇಶ್ವರಪ್ಪ ವಿರುದ್ಧ ಗೆಲುವು ಸಾಧಿಸಿದರು. ದೇವರಾಜು ಅರಸು ಸಂಪುಟದಲ್ಲಿ ಅವರು ಸಚಿವೆಯಾಗಿದ್ದರು. ಇದು ದಾವಣಗೆರೆಗೆ ದೊರೆತ ಮೊದಲ ಸಚಿವ ಸ್ಥಾನವಾಗಿತ್ತು.

1994ರಲ್ಲಿ ಮೊದಲ ಬಾರಿಗೆ ಶಾಮನೂರು ಶಿವಶಂಕರಪ್ಪ ಈ ಕ್ಷೇತ್ರದಿಂದ ಮೊದಲ ಬಾರಿ ಕಣಕ್ಕಿಳಿದರು. ಇದೇ ಕ್ಷೇತ್ರದಿಂದ 2004ರವರೆಗೆ ಸ್ಪರ್ಧಿಸಿ ನಿರಂತರವಾಗಿ ಗೆಲುವು ಸಾಧಿಸಿದ್ದರು.

ಈ ಮಧ್ಯೆ 1998ರಲ್ಲಿ ಶಾಮನೂರು ಶಿವಶಂಕರಪ್ಪ ತಮ್ಮ ಪುತ್ರ ಎಸ್‌.ಎಸ್‌.ಮಲ್ಲಿಕಾರ್ಜುನ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟು, ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ಒಂದು ವರ್ಷದ ಅವಧಿಗೆ ಸಂಸದರಾಗಿಯೂ ಆಯ್ಕೆಯಾದರು. ಹೀಗೆ 1998ರಿಂದ ದಾವಣಗೆರೆಯಲ್ಲಿ ಆರಂಭವಾದ ತಂದೆ, ಮಗನ ಜುಗಲ್‌ಬಂದಿ ರಾಜಕಾರಣವು 2013ರ ವರೆಗೂ ಮುಂದುವರಿಯಿತು. 2008ರಲ್ಲಿ ದಾವಣಗೆರೆ ವಿಧಾನ ಸಭಾ ಕ್ಷೇತ್ರವು ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳಾಗಿ ವಿಂಗಡಣೆಯಾಯಿತು. ಉತ್ತರ ಕ್ಷೇತ್ರದಲ್ಲಿ ಎಸ್‌.ಎಸ್.ಮಲ್ಲಿಕಾರ್ಜುನ ಹಾಗೂ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಸ್ಪರ್ಧಿಸುತ್ತಾ ಬಂದಿದ್ದಾರೆ.

1999ರಲ್ಲಿ ನಡೆದ ಚುನಾವಣೆ ಯಲ್ಲಿ ಎಸ್‌.ಎಸ್‌.ಮಲ್ಲಿಕಾರ್ಜುನ ಸ್ಪರ್ಧಿಸಿ ಜಯ ಗಳಿಸಿದರು. ಆಗ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಎಸ್.ಎಂ.ಕೃಷ್ಣ ನೇತೃತ್ವದ ಸಚಿವ ಸಂಪುಟದಲ್ಲಿ ಅವರು ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವರಾದರು. ಇದು ಚಿತ್ರದುರ್ಗದಿಂದ ದಾವಣಗೆರೆ ವಿಭಜನೆಯಾಗಿ ಸ್ವತಂತ್ರ ಜಿಲ್ಲೆಯಾದ ನಂತರ ದೊರೆತ ಮೊದಲ ಸಚಿವ ಸ್ಥಾನವಾಗಿತ್ತು.

2013ರಲ್ಲಿ ನಡೆದ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಆಯ್ಕೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಎರಡು ವರ್ಷಗಳ ಕಾಲ ಎಪಿಎಂಸಿ ಮತ್ತು ತೋಟಗಾರಿಕೆ ಸಚಿವರಾದರು. ಸಂಪುಟದ ಪುನರ್‌ರಚನೆ ಮಾಡಿ ಶಾಮನೂರು ಶಿವಶಂಕರಪ್ಪ ಅವರಿಗೆ ನೀಡಿದ್ದ ಖಾತೆಯನ್ನು ಹಿಂದಕ್ಕೆ ಪಡೆದು, ಉತ್ತರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದ ಪುತ್ರ
ಎಸ್‌.ಎಸ್‌.ಮಲ್ಲಿಕಾರ್ಜುನ ಅವರಿಗೆ ಅದೇ ಖಾತೆ ನೀಡಲಾಯಿತು. ಆ ಮೂಲಕ ತಂದೆ ಒಂದು ಬಾರಿ ಸಚಿವರಾದರೆ, ಪುತ್ರ ಮಲ್ಲಿಕಾರ್ಜುನ 2 ಬಾರಿ ಸಚಿವರಾದಂತಾಗಿದೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್ ಅವರು ಅಪ್ಪ–ಮಗ ಇಬ್ಬರಿಗೂ ಕಾಯಂ ಎದುರಾಳಿ. 1999ರಲ್ಲಿ ಮಲ್ಲಿಕಾರ್ಜುನ ವಿರುದ್ಧ ಸ್ಪರ್ಧಿಸಿ 4,293 ಮತಗಳ ಅಂತರಿಂದ ಸೋಲು ಅನುಭವಿಸಿದರು. ನಂತರ ಅವರು 2004 ಮತ್ತು 2008ರಲ್ಲಿ ಎರಡು ಬಾರಿ ಶಾಮನೂರು ಶಿವಶಂಕರಪ್ಪ ವಿರುದ್ಧ ಸ್ಪರ್ಧಿಸಿ ಪೈಪೋಟಿ ನೀಡಿದರು. ಮತ್ತೊಮ್ಮೆ ಅವರ ಎದುರಾಳಿಯಾಗಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ.

ಇದೀಗ 2018ರ ಚುನಾವಣೆ ಹೊಸ್ತಿಲಲ್ಲಿದೆ. ಎಂದಿನಂತೆ ದಕ್ಷಿಣ ಕ್ಷೇತ್ರದಲ್ಲಿ ಮತ್ತೆ ತ್ರಿಕೋನ ಸ್ಪರ್ಧೆಗೆ ಬಿರುಸಿನ ಚಟುವಟಿಕೆ ಆರಂಭ
ವಾಗಿದೆ. ಎಂದಿನಂತೆ ಕಾಂಗ್ರೆಸ್‌ನಿಂದ ಶಾಮನೂರು ಶಿವಶಂಕರಪ್ಪ ಹಾಗೂ ಬಿಜೆಪಿಯಿಂದ ಯಶವಂತರಾವ್‌ ಜಾಧವ್‌ ಹಾಗೂ ಈ ಬಾರಿ ಜೆಡಿಎಸ್‌ನಿಂದ ಅಮಾನುಲ್ಲಾ ಖಾನ್‌ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ.
***
ಅಭಿವೃದ್ಧಿ ಕಾಣದ ಕ್ಷೇತ್ರ...

ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಈ ಭಾಗದಲ್ಲಿ 39 ಕೊಳೆಗೇರಿ  ಪ್ರದೇಶಗಳಿದ್ದು, ಇಲ್ಲಿನ ನಿವಾಸಿಗಳು ಇಂದಿಗೂ ಶುದ್ಧ ಕುಡಿಯುವ ನೀರು, ಒಳಚರಂಡಿ, ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಹಾಗೂ ಉತ್ತಮ ರಸ್ತೆ ಒಳಗೊಂಡಂತೆ ಮೂಲಸೌಕರ್ಯಕ್ಕಾಗಿ ಹಲವು ವರ್ಷಗಳಿಂದ ಪ್ರತಿಭಟನೆ, ಧರಣಿ ನಡೆಸುತ್ತಾ ಬಂದಿದ್ದಾರೆ. ಇಂದಿಗೂ ಈಡೇರಿಲ್ಲ.

ಎಸ್‌.ಎಸ್‌.ಮಲ್ಲಿಕಾರ್ಜುನ ಶಾಸಕರಾಗಿದ್ದ ಅವಧಿಯಲ್ಲಿ ಅರ್ಹರಿಗೆ ಆಶ್ರಯ ಮನೆಗಳನ್ನು ನಿರ್ಮಿಸಿಕೊಡಲಾಗಿತ್ತು. ನಂತರ ಅಭಿವೃದ್ಧಿ ಕೆಲಸಗಳು ನಡೆದಿದ್ದು ಬೆರಳೆಣಿಕೆ ಮಾತ್ರ!

ಹಳೆ ದಾವಣಗೆರೆಗೆ ಸಂಪರ್ಕ ಕಲ್ಪಿಸುವ ಅಶೋಕ ಚಿತ್ರಮಂದಿರದ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಯೋಜನೆ ಜಾರಿಗೆ ಜನಪ್ರತಿನಿಧಿಗಳು ಆಸಕ್ತಿ ವಹಿಸುತ್ತಿಲ್ಲ ಎಂದು ಕ್ಷೇತ್ರದ ನಿವಾಸಿಗಳು ದೂರುತ್ತಾರೆ.

30 ವರ್ಷಗಳಿಂದ ನಿವೇಶನ, ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುತ್ತಾಲೇ ಬಂದಿದ್ದೇವೆ. ಇಂದಿಗೂ ಬೇಡಿಕೆ ಈಡೇರಿಲ್ಲ. ಜನಪ್ರತಿನಿಧಿಗಳು ಕೇವಲ ವೋಟ್‌ ಬ್ಯಾಂಕ್‌ಗಾಗಿ ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದು ಹೆಗಡೆ ನಗರದ ನಿವಾಸಿಗಳ ಅಳಲು.

ಈ ಭಾಗದಲ್ಲಿ ಬಹುತೇಕ ದಲಿತ, ಮುಸ್ಲಿಂ, ಕುರುಬ, ಕ್ರಿಶ್ಚಿಯನ್‌, ಹಿಂದುಳಿದ ಸಮುದಾಯದ ಜನರೇ ಹೆಚ್ಚು ಇದ್ದಾರೆ. ಮುಸ್ಲಿಂ ಮತದಾರರ ಸಂಖ್ಯೆ ತುಸು ಹೆಚ್ಚು ಎನ್ನಬಹುದು. ಕೆಲ ಭಾಗದಲ್ಲಿ ಮಾತ್ರ ಲಿಂಗಾಯತ ಸಮುದಾಯದವರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT