ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂಗಳ ಹಬ್ಬಕ್ಕೆ ಮುಸ್ಲಿಂ ಬಾಂಧವರ ದುಡಿಮೆ

Last Updated 12 ಫೆಬ್ರುವರಿ 2018, 9:07 IST
ಅಕ್ಷರ ಗಾತ್ರ

ಕೋಲಾರ: ಮಹಾ ಶಿವರಾತ್ರಿ ಬಂತೆಂದರೆ ನಗರದ ಸುಲ್ತಾನ್‌ ತಿಪ್ಪಸಂದ್ರ, ಜಮಾಲ್‌ಷಾ ನಗರ ಬಡಾವಣೆಯ ಮುಸ್ಲಿಂ ಸಮುದಾಯದ ಮನೆಗಳಲ್ಲಿ ದುಡಿಮೆಯ ಸಂಭ್ರಮ. ಅರೆ, ಶಿವರಾತ್ರಿಗೂ ಮುಸ್ಲಿಂ ಸಮುದಾಯಕ್ಕೂ ಎತ್ತಣಿಂದೆತ್ತ ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಅದೇ ಇಲ್ಲಿನ ವಿಶೇಷ.

ಹಿಂದೂಗಳ ಹಬ್ಬವಾದ ಶಿವರಾತ್ರಿಯೊಂದಿಗೆ ಮುಸ್ಲಿಂ ಬಾಂಧವರ ಶ್ರಮದ ಕೊಂಡಿ ಬೆಸೆದಿದೆ. ಹಬ್ಬದ ದಿನ ಶಿವನಿಗೆ ಸಾಮೆ, ರಾಗಿ, ಜೋಳ, ಭತ್ತದಿಂದ ತಯಾರಿಸಿದ ಅರಳಿಟ್ಟು ನೈವೇದ್ಯ ಮಾಡಲಾಗುತ್ತದೆ. ನಗರದ ಹಾಗೂ ಸುತ್ತಮುತ್ತಲಿನ ಜನರಿಗೆ ಹಬ್ಬಕ್ಕೆ ಬೇಕಾದ ಸಾಮೆ, ಜೋಳ ಹಾಗೂ ಭತ್ತದ ಪುರಿಯನ್ನು ಮುಸ್ಲಿಂ ಸಮುದಾಯದವರು ಹುರಿದು ಕೊಡುತ್ತಾರೆ.

ಸುಲ್ತಾನ್‌ ತಿಪ್ಪಸಂದ್ರ, ಜಮಾಲ್‌ಷಾ ನಗರದಲ್ಲಿನ ಸಾಕಷ್ಟು ಮುಸ್ಲಿಂ ಕುಟುಂಬಗಳು ಈ ಕಾಯಕದಲ್ಲೇ ಬದುಕು ಕಟ್ಟಿಕೊಂಡಿವೆ. ವಂಶಪಾರಂಪರ್ಯವಾಗಿ ಬಂದಿರುವ ಈ ಕಾಯಕವನ್ನು ಮುಂದುವರಿಸಿಕೊಂಡು ಹೋಗುತ್ತಿವೆ. ಹಿಂದೆ ಸಾರ್ವಜನಿಕರು ಈ ಕುಟುಂಬಗಳಿಗೆ ಸಾಮೆ, ಜೋಳ, ರಾಗಿ ಕೊಟ್ಟು ಪುರಿ ಹುರಿಸಿಕೊಳ್ಳುತ್ತಿದ್ದರು. ಇದರಿಂದ ಕುಟುಂಬಗಳಿಗೆ ಹಣ ಸಂಪಾದನೆಯಾಗುತ್ತಿತ್ತು.

ಕಾಲ ಬದಲಾದಂತೆ ಈ ಆಚರಣೆ ನೇಪಥ್ಯಕ್ಕೆ ಸರಿದಿದೆ. ಈಗ ಮುಸ್ಲಿಂ ಕುಟುಂಬಗಳೇ ತಮಿಳುನಾಡು, ವಿಜಾಪುರ, ದಾವಣಗೆರೆ ಕಡೆಯಿಂದ ಸಾಮೆ, ಭತ್ತ, ಜೋಳ ಖರೀದಿಸಿ ತಂದು ಹುರಿದು ಪೊಟ್ಟಣ ಕಟ್ಟಿ ಮಾರಾಟ ಮಾಡುತ್ತಿವೆ. ಶಿವರಾತ್ರಿಗೂ ಮುನ್ನ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಹಗಲಿರುಳು ಇದೇ ಕೆಲಸ. ಹಬ್ಬ ಮುಗಿದ ನಂತರ ಕಾರದ ಶೇಂಗಾ ಬೀಜ ತಯಾರಿಕೆಯ ಕಾಯಕ.

ಹುರಿಯುವುದು ಹೇಗೆ?: ಸಮುದ್ರ ದಂಡೆಯಲ್ಲಿ ಸಿಗುವ ಶುದ್ಧ ಮರಳನ್ನು ಪುರಿ ಹುರಿಯುವುದಕ್ಕೆ ಬಳಸಲಾಗುತ್ತದೆ. ಒಲೆಯ ಮೇಲಿನ ಕಬ್ಬಿಣದ ಬಾಣಲೆಗೆ ಮರಳು ಹಾಕಿ ಬಿಸಿ ಮಾಡಲಾಗುತ್ತದೆ. ಬಿಸಿಯಾದ ಮರಳಿಗೆ ಸಾಮೆ, ಜೋಳ ಹಾಗೂ ಭತ್ತ ಹಾಕುತ್ತಿದ್ದಂತೆ ಪುರಿ ಹುರಿಯುತ್ತದೆ. ನಂತರ ಜಾಲರಿಯಿಂದ ಮರಳು ಮತ್ತು ಪುರಿ ಕಾಳು ಪ್ರತ್ಯೇಕಿಸಲಾಗುತ್ತದೆ.

ಬಳಿಕ ಎರಡು ಹಂತದಲ್ಲಿ ಪುರಿಯನ್ನು ಜರಡಿ ಮಾಡಿ, ಪ್ಲಾಸ್ಟಿಕ್‌ ಪೊಟ್ಟಣ ಕಟ್ಟಲಾಗುತ್ತದೆ. ಈ ಕೆಲಸದಲ್ಲಿ ಕುಟುಂಬದ ಹೆಂಗಸರು ಕೈ ಜೋಡಿಸುತ್ತಾರೆ. ಮಾರುಕಟ್ಟೆಯಲ್ಲಿ 1 ಲೀಟರ್‌ ಪುರಿಗೆ ₹ 20 ದರವಿದೆ. ಶಿವರಾತ್ರಿ ಹಿಂದಿನ ದಿನ ಪುರಿ ವ್ಯಾಪಾರ ಭರ್ಜರಿಯಾಗಿರುತ್ತದೆ.

ಪ್ರಸಾದವಾಗಿ ಸ್ವೀಕಾರ: ಶಿವರಾತ್ರಿ ದಿನ ಜಾಗರಣೆ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಜನರಲ್ಲಿ ಬೇರೂರಿದೆ. ಹಬ್ಬದಂದು ರಾತ್ರಿಯಿಡೀ ಶಿವನಾಮ ಸ್ಮರಣೆಯಲ್ಲಿ ಜಾಗರಣೆ ಮಾಡುವುದು ಮತ್ತೊಂದು ವಿಶೇಷ. ಶಿವ ದೇವಾಲಯಗಳಲ್ಲಿ ಬಿಲ್ವ ಪತ್ರೆ ಅರ್ಚನೆಯು ಪ್ರಮುಖವಾದುದು.

ಗ್ರಾಮೀಣ ಭಾಗದಲ್ಲಿ ಶಿವನಿಗೆ ನೈವೇದ್ಯವಾಗಿ ಸಾಮೆ ಅಥವಾ ರಾಗಿ ಅರಳಿಟ್ಟು ಇಡುವುದು ಹಿಂದಿನಿಂದಲೂ ನಡೆದುಕೊಂಡು ಪದ್ಧತಿ. ಹುರಿದ ಸಾಮೆ, ಜೋಳ, ಭತ್ತದ ಕಾಳುಗಳು ಹಾಲಿನಂತೆ ಬೆಳ್ಳಗೆ, ಹೂವಿನಂತೆ ಹಗುರವಾಗಿರುತ್ತವೆ. ಈ ಕಾಳುಗಳನ್ನು ಸಕ್ಕರೆ ಅಥವಾ ಬೆಲ್ಲದ ಪಾಕದಲ್ಲಿ ಹಾಕಿ ಉಂಡೆ ಮಾಡಿ ನೈವೇದ್ಯವಾಗಿ ಇಟ್ಟು ನಂತರ ಪ್ರಸಾದವಾಗಿ ಸ್ವೀಕರಿಸುತ್ತಾರೆ.

ನೈವೇದ್ಯ ಸ್ವೀಕಾರಕ್ಕೂ ಮುನ್ನ ಹಕ್ಕಿಗಳಿಗೆ ಒಂದು ಎಡೆ ಮೀಸಲಿಡಲಾಗುತ್ತದೆ. ಭಕ್ತರು ನೈವೇದ್ಯವಾಗಿ ಏನು ಇಟ್ಟರೂ ವಿಷಕಂಠ ಶಿವ ಪ್ರೀತಿಯಿಂದ ಸ್ವೀಕರಿಸುತ್ತಾನೆ ಎಂದು ಆಸ್ತಿಕರು ನಂಬಿಕೊಂಡು ಬಂದಿದ್ದಾರೆ. ನಾಗರೀಕತೆ ಬೆಳೆದಂತೆ ಹಬ್ಬದ ಆಚರಣೆ ಕೂಡ ಬದಲಾಗುತ್ತಿದೆ. ಧಾನ್ಯ ಹುರಿಯಲು ಯಂತ್ರೋಪಕರಣ ಬಳಸುತ್ತಿರುವುದರಿಂದ ಸಾಂಪ್ರದಾಯಿಕ ಪದ್ಧತಿಯಲ್ಲಿ ಪುರಿ ಹುರಿಯುವವರ ಸಂಖ್ಯೆ ಕ್ಷೀಣಿಸುತ್ತಿದೆ.

* * 

ಹಬ್ಬ ಬಂತೆಂದರೆ ಹಗಲಿರುಳು ಕೆಲಸ. ಖರ್ಚು ವೆಚ್ಚ ಕಳೆದು ಸಿಗುವ ಲಾಭ ತುಂಬಾ ಕಡಿಮೆ.
–ಫೈರೋಜ್‌ ಬೇಗ್‌, ಸಾಮೆ ಪುರಿ ಬಟ್ಟಿ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT