ತುಮಕೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಅವರ ಪುತ್ರ ಅನಿಲ್ ಚಂದ್ರ ಷಾ ವಿರುದ್ಧ ದೂರು ದಾಖಲಾಗಿರುವ ಪ್ರಕರಣ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿ ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಸಂಘ (ಎನ್ಎಸ್ಯುಐ)ದ ವಿದ್ಯಾರ್ಥಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.
ಎನ್ಎಸ್ಯುಐ ಜಿಲ್ಲಾ ಘಟಕದ ಅಧ್ಯಕ್ಷಸುಮುಖ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಅಮಿತ್ ಷಾ ಅವರ ಆಸ್ತಿ ಕೇವಲ ಒಂದು ವರ್ಷದಲ್ಲಿ 300 ಪಟ್ಟು ಹೆಚ್ಚಾಗಿದ್ದು, ಇದರ ಬಗ್ಗೆ ದೂರು ದಾಖಲಾದರೂ ಸಹ ಯಾವುದೇ ತನಿಖೆಯಾಗದಿರುವುದು ನಿಗೂಢವಾದ ಸಂಗತಿ ಹಾಗಾಗಿ ಕೂಡಲೇ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಅವರು ಗುಜರಾತ್ ರಾಜ್ಯದ ಗೃಹಸಚಿವರಾಗಿದ್ದಾಗ ನಡೆದ ನಕಲಿ ಎನ್ಕೌಂಟರ್ ಬಗ್ಗೆ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರೊಬ್ಬರ ನಿಗೂಢ ಸಾವಿನ ಬಗ್ಗೆ ಹಲವು ಅನುಮಾನಗಳಿವೆ. ಆದರೆ ಈ ಬಗ್ಗೆ ಸರಿಯಾದ ತನಿಖೆ ನಡೆಯುತ್ತಿಲ್ಲ ಎಂದು ಆಗ್ರಹಿಸಿದರು.
ಇದು ನ್ಯಾಯಾಂಗದ ಮೇಲೆ ಸಾಮಾನ್ಯ ಜನರಿಗೆ ಇರುವ ನಂಬಿಕೆಯನ್ನು ಹುಸಿಗೊಳಿಸುವಂತಿದೆ. ಕೇಂದ್ರ ಸರ್ಕಾರ ಕೂಡಲೇ 2005 ರಿಂದ ಇದುವರೆಗೆ ನಡೆದಿರುವ ಎಲ್ಲಾ ಬೆಳವಣಿಗೆಗಳ ಕುರಿತು ಸಮಗ್ರ ತನಿಖೆ ನಡಸಬೇಕೆಂಬುದು ಒತ್ತಾಯಿಸಿದರು. ಕೇಂದ್ರ ಸರಕಾರ ಕಪ್ಪು ಹಣ ತಡೆಯುವ ಹೆಸರಿನಲ್ಲಿ ನೋಟ ಅಮಾನ್ಯೀಕರಣ ಮಾಡಿದ ಸಂದರ್ಭದಲ್ಲಿ ಅವರು ಅಧ್ಯಕ್ಷರಾಗಿರುವ ಅಲಹಾಬಾದ್ ಸಹಕಾರಿ ಬ್ಯಾಂಕಿನ ವಿವಿಧ ಶಾಖೆಗಳಿಂದ ಕೇವಲ ನಾಲ್ಕು ದಿನದಲ್ಲಿ ₹ 745 ಕೋಟಿ ಹಣ ಬದಲಾವಣೆಯಾಗಿದ್ದು ಇದಕ್ಕೆ ಆರ್ಬಿಐ ಬ್ಯಾಂಕ್ ಹೇಗೆ ಅನುಮತಿ ನೀಡಿದೆ ಎಂಬುದು ಸಂಶಯವಾಗಿದೆ. ಹಾಗಾಗಿ ಈ ಎಲ್ಲಾ ಪ್ರಕರಣಗಳ ಕುರಿತು ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮಾಡಲಾಗಿದೆ ಎಂದರು.
ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಅನಿತಾ ಅವರಿಗೆ ಮವನಿ ಪತ್ರ ಸಲ್ಲಿಸಲಾಯಿತು. ಎನ್ಎಸ್ಯುಐ ಜಿಲ್ಲಾ ಉಪಾಧ್ಯಕ್ಷ ಉಲ್ಲಾಸ್ ಗೌಡ, ಗಗನ್ ಸುರೇಶ್, ಅಮರ್, ಎಚ್.ವಿ.ಪ್ರತೀಕ್, ಗಿರೀಶ್, ಮನೋಜ್ ಇದ್ದರು.