ನವದೆಹಲಿ, ಜುಲೈ 3– ಹಿಂದಿನ ಆಶ್ರಿತ ಸಂಸ್ಥಾನಗಳ ಮಹಾರಾಜರುಗಳಿಗೆ ಕೊಡುತ್ತಿರುವ ರಾಜಧನವನ್ನು ರದ್ದುಪಡಿಸುವುದಕ್ಕಾಗಿ ರಾಜ್ಯಾಂಗವನ್ನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ರಾಜ್ಯಾಂಗ ತಿದ್ದುಪಡಿಗೆ ಸಂಬಂಧಿಸಿದ ಮಸೂದೆಯೊಂದನ್ನು ಪ್ರಾಯಶಃ ಮುಂದಿನ ಪಾರ್ಲಿಮೆಂಟ್ ಅಧಿವೇಶನದಲ್ಲಿ ಮಂಡಿಸಲಾಗುವುದು.
279 ಮಂದಿಗೆ 5 ಕೋಟಿ ರೂ.
ನವದೆಹಲಿ, ಜು. 3– ಭಾರತದಲ್ಲಿ ಒಟ್ಟು 279 ಮಾಜಿ ಸಂಸ್ಥಾನಾಧೀಶ್ವರರಿದ್ದಾರೆ. ವರ್ಷಕ್ಕೆ ಅವರಿಗೆ ನೀಡುತ್ತಿರುವ ಒಟ್ಟು ರಾಜಧನ 5 ಕೋಟಿ ರೂ.
ಇದರಲ್ಲಿ ಹೆಚ್ಚು ರಾಜಧನ ಪಡೆಯುತ್ತಿರುವವರೆಂದರೆ ಮೈಸೂರಿನ ರಾಜರು. ನಂತರ ಹೈದರಾಬಾದಿನ ನಿಜಾಮರು.
ಜೈಪುರ ಮತ್ತು ತಿರುವಾಂಕೂರಿನ ರಾಜರಿಗೆ ತಲಾ 18 ಲಕ್ಷ ರೂ. ಪಾಟಿಯಾಲ ರಾಜರಿಗೆ 17 ಲಕ್ಷ ರೂ. ಬರೋಡದ ಮಹಾರಾಜರಿಗೆ 13.64 ಲಕ್ಷ ರೂ. ರಾಜಧನ ಪಾವತಿಯಾಗುತ್ತಿದೆ.
ವರ್ಷಕ್ಕೆ ಒಂದು ಲಕ್ಷ ರೂ. ಗಿಂತ ಕಡಿಮೆ ರಾಜಧನ ಪಡೆಯುವ ರಾಜರ ಸಂಖ್ಯೆ 179. ಒಂದರಿಂದ ಐದು ಲಕ್ಷ ರೂ.ವರೆಗೆ ರಾಜಧನ ಪಡೆಯುವವರ ಸಂಖ್ಯೆ 17. 5 ರಿಂದ ಹತ್ತು ಲಕ್ಷ ರೂ. ಪಡೆಯುವವರ ಸಂಖ್ಯೆ 19.
ಶಿಕ್ಷಣದ ಆಯೋಗದ ಶಿಫಾರಸಿನಂತೆ ರಾಜ್ಯದಲ್ಲಿ ವಿದ್ಯಾಭ್ಯಾಸ ಸುಧಾರಣೆ ನಿರ್ಧಾರ
ಬೆಂಗಳೂರು, ಜುಲೈ 3– ಸ್ವಲ್ಪ ಹೆಚ್ಚೂ ಕಡಿಮೆ ಶಿಕ್ಷಣ ಆಯೋಗದ ವರದಿಗೆ ಅನುಗುಣವಾಗಿ ರಾಜ್ಯದಲ್ಲಿ ವಿದ್ಯಾಭ್ಯಾಸವನ್ನು ಸುಧಾರಿಸಲು ಸರ್ಕಾರ ಸಮ್ಮತಿಸಿದೆ.
ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಈ ವಿಷಯವನ್ನು ಇಂದು ಇಲ್ಲಿ ಪ್ರಕಟಿಸಿದರು.