ಬೆಂಗಳೂರು: ಇಸ್ರೇಲ್ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ರೈತರ ಎಲ್ಲ ಸಮಸ್ಯೆಗಳೂ ಬಗೆಹರಿಯವುವೇ ಎಂದು ವಿಧಾನಪರಿಷತ್ತಿನಲ್ಲಿ ಬಿಜೆಪಿಯ ಎನ್.ರವಿಕುಮಾರ್ ಪ್ರಶ್ನಿಸಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿ, ‘ಭಾರತೀಯ ಕೃಷಿ ಪದ್ಧತಿ ವಿಫಲ ಆಗಿರುವುದರಿಂದ ಇಸ್ರೇಲ್ ಪದ್ಥತಿ ಅಳವಡಿಸಿಕೊಳ್ಳಲಾಗುತ್ತಿದೆಯೇ? ಹಾಗಿದ್ದರೆ, ನಮ್ಮ ಪದ್ಧತಿಯಲ್ಲಿ ಯಾವ ದೋಷವಿದೆ’ ಎಂದು ಅವರು ಪ್ರಶ್ನಿಸಿದರು.
‘ರೈತರ ಪರ ಸರ್ಕಾರ ಎಂದು ಹೇಳಿಕೊಳ್ಳುತ್ತೀರಿ. ನಿಜಕ್ಕೂ ರೈತರ ಪರ ಆಗಿದ್ದರೆ, ರೈತರು ಗ್ರಾಮಗಳನ್ನು ಏಕೆ ತೊರೆದು ಹೋಗುತ್ತಿದ್ದರು, ಆತ್ಮಹತ್ಯೆಗಳು ಏಕೆ ಆಗುತ್ತಿದ್ದವು’ ಎಂದು ಕೇಳಿದರು.
ಶಿಕ್ಷಣಕ್ಕೆ ಆದ್ಯತೆ ನೀಡುವುದಾಗಿ ಭಾಷಣದಲ್ಲಿ ಪ್ರಸ್ತಾಪಿಸಲಾಗಿದೆ. 412 ಕಾಲೇಜುಗಳ ಪೈಕಿ 390 ಕಾಲೇಜುಗಳಲ್ಲಿ ಪ್ರಾಂಶುಪಾಲರೇ ಇಲ್ಲ. ಏಳು ವಿಶ್ವವಿದ್ಯಾಲಯಗಳಲ್ಲಿ ಈಚೆಗಷ್ಟೇ ಮೂರು ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕ ಆಗಿದೆ. ಉಳಿದವು ಖಾಲಿ ಉಳಿದಿವೆ ಎಂದು ಅವರು ಹೇಳಿದರು.