ಮೈಸೂರು– ಮಹಾರಾಷ್ಟ್ರ ಗಡಿ ವಿವಾದ ಚರ್ಚೆಗೆಇನ್ನು ಅವಕಾಶ ಇಲ್ಲ
ಕಲ್ಬುರ್ಗಿ, ಜು. 4– ಮೈಸೂರು– ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಪುನಃ ಯಾವುದೇ ರೀತಿಯ ಚರ್ಚೆಗೂ ತಾವಾಗಿ ಅವಕಾಶ ನೀಡುವುದಿಲ್ಲವೆಂದು ರಾಜ್ಯದ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ನಿನ್ನೆ ಇಲ್ಲಿ ಘೋಷಿಸಿದರು.
ಮಹಾಜನ್ ಆಯೋಗದ ಶಿಫಾರಸುಗಳನ್ನು ಕಾರ್ಯಗತ ಮಾಡುವುದೊಂದೇ ಕೇಂದ್ರ ಸರ್ಕಾರಕ್ಕೆ ಇನ್ನುಳಿದಿರುವ ಮಾರ್ಗವೆಂದು ಅವರು ನುಡಿದರು.
ಸ್ಟೇಟ್ ಸಚಿವರ ವೇತನ, ಭತ್ಯದ ಸುಗ್ರೀವಾಜ್ಞೆ
ಬೆಂಗಳೂರು, ಜು. 4– ರಾಜ್ಯದಲ್ಲಿ ಹೊಸದಾಗಿ ನೇಮಕವಾದ ಸ್ಟೇಟ್ ಸಚಿವರುಗಳ ವೇತನ, ಭತ್ಯಗಳನ್ನು ಗೊತ್ತು ಮಾಡಿ ರಾಜ್ಯಪಾಲರು ಸುಗ್ರೀವಾಜ್ಞೆ ಹೊರಡಿಸಿದ್ದಾರೆ.
ಮಂತ್ರಿಗಳ ವೇತನ ಭತ್ಯಗಳ ಶಾಸನಕ್ಕೆ ತಿದ್ದುಪಡಿ ರೂಪದಲ್ಲಿರುವ ಅದು ಜುಲೈ 2ರಂದೇ ಪ್ರಕಟವಾಗಿದ್ದು ಮೇ 29ರಿಂದಲೇ ಜಾರಿಗೆ ಬಂದಿದೆಯೆಂದು ಸ್ಪಷ್ಟಪಡಿಸಲಾಗಿದೆ.
ಸ್ಟೇಟ್ ಸಚಿವರು ಮಾಹೆಯಾನೆ 1000 ರೂ. ವೇತನ, 350 ರೂ.ಗಳ ಸಾರಿಗೆ ಭತ್ಯ ಮತ್ತು ಸರ್ಕಾರಿ ಗೃಹದಲ್ಲಿ ವಾಸಿಸದೇ ಇರುವವರಿಗೆ 350 ರೂ.ಗಳ ಮನೆ ಬಾಡಿಗೆ ಭತ್ಯ ಪಡೆಯಲು ತಿದ್ದುಪಡಿ ಅವಕಾಶ ಮಾಡಿಕೊಟ್ಟಿದೆ.
ಭಾರತಕ್ಕೆ ರಷ್ಯ ವಿಮಾನಗಳು: ಯಾವ ಷರತ್ತೂ ಇಲ್ಲ
ನವದೆಹಲಿ, ಜು. 4– ನಾಗರಿಕ ಸಂಚಾರ ಬಳಕೆಗೆ ಟಿ.ಯು. 134 ವಿಮಾನಗಳ ಮಾರಾಟಕ್ಕೆ ರಷ್ಯಾ ಯಾವ ಷರತ್ತನ್ನೂ ಹಾಕಿಲ್ಲ ಎಂದು ವಾಣಿಜ್ಯ ಸಚಿವ ದಿನೇಶ್ ಸಿಂಗ್ ಇಂದು ಸ್ಪಷ್ಟಪಡಿಸಿದರು.
ಹಿಂದೂ ಸಾಗರದಲ್ಲಿ ಅಮೆರಿಕ ಮಿಲಿಟರಿ ನೆಲೆ?
ವಾಷಿಂಗ್ಟನ್, ಜು. 4– ಬ್ರಿಟನ್ನಿನ ರಾಯಲ್ ನೌಕಾದಳ ಒಮ್ಮೆ ಪ್ರಭುತ್ವ ಸ್ಥಾಪಿಸಿದ್ದ ಹಿಂದೂ ಮಹಾಸಾಗರದ ವಿಶಾಲ ಪ್ರದೇಶದಲ್ಲಿ ಯಾವುದಾದರೂ ಒಂದು ರೀತಿಯ ಮಿಲಿಟರಿ ನೆಲೆ ಸ್ಥಾಪಿಸುವ ಬಗ್ಗೆ ಅಮೆರಿಕ ಹೆಚ್ಚು ಸದ್ದುಗದ್ದಲವಿಲ್ಲದೆ ಸರ್ವೆ ನಡೆಸುತ್ತಿದೆ.
ಬ್ರಿಟಿಷ್ ನೌಕಾಪಡೆ ವಾಪಸಾತಿಯಿಂದ ಉಂಟಾದ ಶೂನ್ಯವನ್ನು ತುಂಬುವ ಅಪೇಕ್ಷೆಯೇನೂ ಅಮೆರಿಕಕ್ಕೆ ಇಲ್ಲ ಎಂದು ಅಧಿಕಾರಿಗಳು ಒತ್ತಿ ಹೇಳುತ್ತಾರೆ.