ಈ ಸಂದರ್ಭದಲ್ಲಿ ಎಐಎಂಎಸ್ಎಸ್ ಮಹಿಳಾ ಸಂಘಟನೆಯ ಸದಸ್ಯೆ ಮಧುಲತಾ ಗೌಡರ್ ಮಾತನಾಡಿ, ‘ಈ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು. ಈ ಕೃತ್ಯ ಎಸಗಿದವರನ್ನು ಕೂಡಲೇ ಉಗ್ರ ಶಿಕ್ಷೆಗೊಳಪಡಿಸಬೇಕು. ದೇಶದಲ್ಲಿ ಬಾಲಕಿಯರು, ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳಿಗೆ ಪ್ರಮುಖವಾಗಿ ಅಶ್ಲೀಲ ಅಂತರ್ಜಾಲ ತಾಣಗಳು, ಸಿನಿಮಾ ಸಾಹಿತ್ಯ ಕಾರಣ. ಆದ್ದರಿಂದ ಸರ್ಕಾರಗಳು ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ, ಸಿನಿಮಾ, ಸಾಹಿತ್ಯಗಳಲ್ಲಿ ಅಶ್ಲೀಲತೆಯನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು’ ಎಂದು ಆಗ್ರಹಿಸಿದರು.
ಎಐಡಿವೈಓ ಸಂಘಟನೆಯ ರಮೇಶ ಹೊಸಮನಿ ಮಾತನಾಡಿ, ’ನಿರಂತರವಾಗಿ ಹೆಚ್ಚುತ್ತಿರುವ ಬಾಲಕಿಯರ, ಮಹಿಳೆಯರ ಮೇಲಿನ ಅತ್ಯಾಚಾರ ದೌರ್ಜನ್ಯಗಳನ್ನು ತಡೆಗಟ್ಟಲು ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಇದರ ಪರಿಣಾಮವಾಗಿ ಇಂತಹ ಘಟನೆಗಳು ಮರುಕಳಿಸುತ್ತಿವೆ. ಮಹಿಳೆಯರ ಭದ್ರತೆ ಬಗ್ಗೆ ಸರ್ಕಾರಗಳು ನಿಷ್ಕಾಳಜಿ ತೋರುತ್ತಿವೆ. ಇಂಥ ಘಟನೆಗಳು ನಡೆದಾಗಲಾದರೂ ಸರ್ಕಾರಗಳು ಎಚ್ಚೆತ್ತುಕೊಂಡು ಸುರಕ್ಷಿತ ವಾತಾವರಣ ನಿರ್ಮಾಣ ಮಾಡಬೇಕು’ ಎಂದು ಮಧುಲತಾ ಆಗ್ರಹಿಸಿದರು.