ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ನಿಗೂಢ ಸಾವು: 7 ದಿನಗಳ ಆಚರಣೆ, 6 ದಿನ ನೇಣು ಹಾಕಿಕೊಳ್ಳಲು ರಿಹರ್ಸಲ್‌

Last Updated 5 ಜುಲೈ 2018, 14:54 IST
ಅಕ್ಷರ ಗಾತ್ರ

ನವದೆಹಲಿ: ಬುರಾರಿ ಪ್ರದೇಶದಲ್ಲಿ ಒಂದೇ ಕುಟುಂಬದ 11 ಮಂದಿಯ ಸಾಮೂಹಿಕ ಸಾವು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸಿಸಿಟಿವಿ ದೃಶ್ಯಗಳಿಂದ ಮಹತ್ತರ ಸುಳಿವು ದೊರೆತಿದೆ.

ಭಾನುವಾರ ನೇಣು ಹಾಕಿರುವ ಸ್ಥಿತಿಯಲ್ಲಿ ಕಂಡುಬಂದ ಸಾಮೂಹಿಕ ಸಾವಿಗೆ ಆ ಕುಟುಂಬ ಅನುಸರಿಸಿದ ಆಚರಣೆಯೇ ಕಾರಣವಿರಬಹುದು ಎಂಬ ಅನುಮಾನ ಗಟ್ಟಿಯಾಗಿದೆ. ಅಕ್ಕ–ಪಕ್ಕದ ಮನೆಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿರುವ ಪೊಲೀಸರು7 ದಿನಗಳ ವಂದನೆಸಮರ್ಪಣಾ ಆಚರಣೆಯನ್ನು ಗುರುತಿಸಿದ್ದಾರೆ.

ಕುಟುಂಬದ ಸದಸ್ಯ ಭಟಿಯಾ ಸಾಮೂಹಿಕ ನೇಣು ಹಾಕಿಕೊಳ್ಳುವ ಆಚರಣೆಯ ನೇತೃತ್ವ ವಹಿಸಿದ್ದರು. ಈ ಆಚರಣೆಯಲ್ಲಿ ಬದುಕುಳಿಯುವ ಪೂರ್ಣ ಭರವಸೆ ಹೊಂದಿದ್ದ ಅವರು, ಸಮಸ್ಯೆಗಳನ್ನು ಎದುರಿಸುತ್ತಿದ್ದ ಸಂಬಂಧಿಯೊಂದಿಗೂ ಅದನ್ನು ಮರುಆಚರಿಸಲು ಯೋಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಸಿಸಿಟಿವಿಯಲ್ಲಿ ಏನಿದೆ: ಕುಟುಂಬದ ಸದಸ್ಯೆ ಸವಿತಾ ಮತ್ತು ಆಕೆಯ ಮಗಳು ನೀತು ಶನಿವಾರ ರಾತ್ರಿ 10ಗಂಟೆಗೆ ಕಾಲುಮಣೆ(ಸ್ಟೂಲ್ಸ್)ಗಳನ್ನು ತಂದಿರುವುದು; 15 ನಿಮಿಷಗಳ ನಂತರ, 15 ವರ್ಷ ವಯೋಮಾನದ ಧೃವ್‌ ಮತ್ತು ಶಿವರಾಮ್‌ ಕುಟುಂಬದ ಪ್ಲೇವುಡ್‌ ಮಳಿಗೆಯಿಂದ ಕೇಬಲ್‌ ಎಳೆದು ತಂದಿರುವ ದೃಶ್ಯಗಳಿವೆ. ಕಾಲುಮಣೆ ಮತ್ತು ಕೇಬಲ್‌ ನೇಣು ಹಾಕಿಕೊಳ್ಳಲು ಬಳಸಿರುವ ವಸ್ತುಗಳಾಗಿವೆ.

11 ವರ್ಷಗಳ ಹಿಂದೆ...

ಕುಟುಂಬ ಅನುಸರಿಸಿದ ಆಚರಣೆಗೆ ಸಂಬಂಧಿಸಿದಂತೆ ಅನೇಕ ಬರಹಗಳಿದ್ದ ನೋಟ್‌ ಪುಸ್ತಕ ಹಾಗೂ ಹಾಳೆಗಳನ್ನು ಪೊಲೀಸರು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಇದರ ಪ್ರಕಾರ,ಇಡೀ ಕುಟುಂಬದ ಯಾರೊಬ್ಬರಿಗೂ ಸಾಯುವ ಇಚ್ಛೆ ಇರಲಿಲ್ಲ. ನೇಣು ಹಾಕಿಕೊಳ್ಳುವ ಆಚರಣೆಯ ನಂತರ ಅವರೆಲ್ಲರೂ ಮತ್ತಷ್ಟು ಬಲಿಷ್ಠರಾಗುವ ನಂಬಿಕೆ ಹೊಂದಿದ್ದರು.

ಪೊಲೀಸರ ಪ್ರಕಾರ, ಮನೆಯ ಹಿರಿಯ ಭೋಪಾಲ್‌ ಸಿಂಗ್‌ ಸಾವಿನ ಕೆಲವು ತಿಂಗಳ ಬಳಿಕ2007ರ ಜುಲೈನಲ್ಲಿಯೇ ಈ ಕುಟುಂಬ ಕೆಲವು ಆಚರಣೆಗಳನ್ನು ಪ್ರಾರಂಭಿಸಿದೆ. 11 ವರ್ಷಗಳಿಂದ ಬರೆದಿರುವ 11 ನೋಟ್‌ ‍ಪುಸ್ತಕಗಳೂ ದೊರೆತಿವೆ. ಮನೆಯ ಹಿರಿಕನ ಸಾವಿನಿಂದಾಗಿ ಇಡೀ ಕುಟುಂಬವೇ ನಲುಗಿ ಹೋಗಿತ್ತು. ಭೋಪಾಲ್‌ ಅವರ ಮೂರನೇ ಮಗ ಲಲಿತ್‌ ಭಾಟಿಯಾ ಇದರಿಂದ ಹೆಚ್ಚು ಪರಿಣಾಮ ಅನುಭವಿಸಿದ್ದರು. ಕುಟುಂಬ ಕಷ್ಟದ ದಿನಗಳನ್ನು ದೂಡುತ್ತಿದ್ದ ದಿನಗಳಲ್ಲಿ ಲಲಿತ್‌ ಭಾಟಿಯಾ, ’ತನ್ನನ್ನು ಹಿರಿಕನಆತ್ಮ ನಿಯಂತ್ರಿಸುತ್ತಿದೆ. ನನ್ನನ್ನು ಶೀಘ್ರವೆ ಮನೆಯ ಮುಖ್ಯಸ್ಥನಾಗಿ ಸ್ವೀಕರಿಸಿ’ ಎಂದು ಕುಟುಂಬದವರೊಂದಿಗೆ ಹೇಳುತ್ತಿದ್ದರು.

ಅಲ್ಲಿಂದ ಮುಂದೆ ಆತನ ತಾಯಿ ಹೊರತು ಪಡಿಸಿ ಕುಟುಂಬದ ಎಲ್ಲರೂ ಲಲಿತ್‌ರನ್ನು ’ಡ್ಯಾಡಿ’ ಎಂದು ಕರೆಯಲು ಪ್ರಾರಂಭಿಸಿದ್ದರು. ಲಲಿತ್‌ ಪುನರ್ಜನ್ಮದ ಸಿದ್ಧಾಂತಗಳನ್ನು ಮನೆಯವರಿಗೆ ವಿವರಿಸುತ್ತಿದ್ದರು. ಆವರೆಗೂ ಆರ್ಥಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದ ಕುಟುಂಬದಲ್ಲಿ ಕ್ರಮೇಣ ಶಾಂತಿ ಮತ್ತು ನೆಮ್ಮದಿ ಮನೆ ಮಾಡಿತು. ಅವರ ವ್ಯಾಪಾರ–ವಹಿವಾಟುಗಳು ದುಪ್ಪಟ್ಟು ಅಭಿವೃದ್ಧಿ ಕಂಡವು.

ಮನೆಯ ಸದಸ್ಯೆ ಪ್ರಿಯಾಂಕಾಗೆ ಸಾಫ್ಟ್‌ವೇರ್‌ ಎಂಜಿನಿಯರ್‌ ವರನೊಂದಿಗೆ ಜೂನ್‌ 17ರಂದು ಮದುವೆ ನಿಶ್ಚಯವಾಯಿತು. ಇದರಿಂದ ಸಂತುಷ್ಟಗೊಂಡಿದ್ದ ಕುಟುಂಬ 7 ದಿನಗಳ ವಂದನೆ ಸಮರ್ಪಣೆ ಆಚರಣೆ ನಡೆಸಲು ನಿರ್ಧರಿಸಿತ್ತು. ಮನೆಯಲ್ಲಿ ಬೇರೆ ಸಂಬಂಧಿಗಳೂ ಇದ್ದುದರಿಂದ ಆಚರಣೆಯನ್ನು ಗೌಪ್ಯವಾಗಿಟ್ಟು ಜೂನ್‌ 23ರ ವರೆಗೂ ಕಾದಿದ್ದರು. ದೊರೆತಿರುವ ಟಿಪ್ಪಣಿಗಳ ಪ್ರಕಾರ, ಮೊದಲ 6 ದಿನವೂ ಎಲ್ಲರೂ ನೇಣು ಹಾಕಿಕೊಳ್ಳಲು ಪೂರ್ವ ತಯಾರಿ(ರಿಹಸರ್ಲ್) ಮಾಡಿಕೊಂಡಿದ್ದಾರೆ. ಕಾಲು ಕಟ್ಟಿಕೊಳ್ಳುವುದು, ಕಣ್ಣು, ಕುತ್ತಿಗೆ ಕಟ್ಟುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಕೊನೆಯ ದಿನ ಕಾಲುಮಣೆ ಹಾಗೂ ಕೇಬಲ್‌ ತಂದಿರುವುದು ಸಿಸಿಟಿವಿ ದೃಶ್ಯಗಳಿಂದ ಸಾಬೀತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT