ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ಮಂಡಿಸಿದ ಮೈತ್ರಿ ಸರ್ಕಾರದ ಮೊದಲ ಬಜೆಟ್ನಲ್ಲಿ ಕರಾವಳಿ ಭಾಗವನ್ನು ಕಡೆಗಣಿಸಲಾಗಿದೆ ಎಂದು ಬಿಜೆಪಿ ವಿಧಾನಸೌಧದ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿತು.
ವಿಧಾನಸೌಧದ ಆವರಣದಲ್ಲಿನ ಗಾಂಧಿ ಪ್ರತಿಮೆ ಬಳಿ ಕಪ್ಪು ಪ್ಟಟಿ ಧರಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರು ಕರಾವಳಿ ಪ್ರದೇಶವನ್ನು ಬಜೆಟ್ನಲ್ಲಿ ಕಡೆಗಣಿಸಲಾಗಿದೆ ಎಂದು ದೂರಿದರು.
ನೀವು ದೇವರ ಆಶೀರ್ವಾದ ಪಡೆಯಲು ಕರಾವಳಿ ದೇಗುಲಗಳಿಗೆ ಬರುತ್ತೀರಿ. ಆದರೆ, ಈ ಪ್ರದೇಶ ಅಭಿವೃದ್ಧಿಯ ವಿಷಯ ಬಂದಾಗ ಯಾವ ಕೊಡುಗೆಯನ್ನೂ ನೀಡುತ್ತಿಲ್ಲ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದರು.
ಈ ಭಾಗದ ಅಭಿವೃದ್ಧಿಯನ್ನು ಕಡೆಗಣಿಸುತ್ತಿರುವುದು ಇಲ್ಲಿನ ಜನರು ಜೆಡಿಎಸ್ಗೆ ಮತ ನೀಡಿಲ್ಲ ಎಂಬ ಕಾರಣಕ್ಕಾ? ಎಂದು ಅವರು ಪ್ರಶ್ನಿಸಿದರು.
‘ನೇತ್ರಾವತಿ, ಸ್ವರ್ಣ, ವರಾಹಿ ನೀಡಿದ ಕರಾವಳಿಗೆ ಬಜೆಟ್ನಲ್ಲಿ ನ್ಯಾಯ ಇಲ್ಲ’. ‘ಧರ್ಮಸ್ಥಳ, ಕೊಲ್ಲೂರು, ಸುಬ್ರಹ್ಮಣ್ಯ, ಕೃಷ್ಣಮಠಗಳನ್ನು ಹೊಂದಿರುವ ಪುಣ್ಯಭೂಮಿ ಕರಾವಳಿಗೆ ಸಿಗಲಿಲ್ಲ ನ್ಯಾಯ’ ಎಂಬ ಫಲಕಗಳನ್ನು ಪ್ರದರ್ಶಿಸಿದರು.
‘ಹಾಸನ+ಮಂಡ್ಯ+ರಾಮನಗರ= ಕರ್ನಾಟಕ’ ಎಂಬ ಫಲಕವನ್ನು ಹಿಡಿದು, ಬಜೆಟ್ನಲ್ಲಿ ಈ ಮೂರು ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ಮತ್ತು ಯೋಜನೆಗಳನ್ನು ನೀಡಲಾಗಿದೆ. ಕರಾವಳಿಯನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ದೂರಿದರು.