ನವದೆಹಲಿ: ಮೊದಲ ಬಾರಿಗೆ ವಾಕ್ ಸ್ವಾತಂತ್ರ್ಯವನ್ನು ನಿಯಂತ್ರಿಸಿದ್ದು ಜವಾಹರಲಾಲ್ ನೆಹರೂ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಶುಕ್ರವಾರ ಆಪಾದಿಸಿದ್ದಾರೆ.
ಜನಸಂಘದ ನಾಯಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ‘ಅಖಂಡ ಭಾರತ’ದ ಧ್ವನಿ ಅಡಗಿಸುವ ಸಲುವಾಗಿಯೇ ನೆಹರೂ 1951ರಲ್ಲಿ ಮೊದಲ ಬಾರಿಗೆ ಸಂವಿಧಾನ ತಿದ್ದುಪಡಿ ಮಾಡಿದರು ಎಂದು ಆರೋಪಿಸಿದ್ದಾರೆ.
‘ಅಖಂಡ ಭಾರತ ಕಲ್ಪನೆ ದೇಶದ ಏಕತೆಗೆ ಧಕ್ಕೆ ತರುತ್ತದೆ, ನೆರೆಯ ರಾಷ್ಟ್ರದೊಂದಿಗೆ ಯುದ್ಧಕ್ಕೆ ಕಾರಣವಾಗುತ್ತದೆ ಎಂದು ನೆಹರೂ ಭಾವಿಸಿದ್ದು ವಿಪರ್ಯಾಸ’ ಎಂದು ಮುಖರ್ಜಿ ಜಯಂತಿ ಪ್ರಯುಕ್ತ ಫೇಸ್ಬುಕ್ನಲ್ಲಿ ಬರೆದ ಲೇಖನದಲ್ಲಿ ಜೇಟ್ಲಿ ಹೇಳಿದ್ದಾರೆ.
ಅನೇಕರ ವಿರೋಧದ ನಡುವೆಯೂ ನೆಹರೂ ಅವರು, ಸರ್ದಾರ್ ವಲ್ಲಭಬಾಯಿ ಪಟೇಲ್ ಸಲಹೆಯ ಮೇರೆಗೆ ಅಖಂಡ ಭಾರತದ ಪರಿಕಲ್ಪನೆಗೆ ಕಡಿವಾಣ ಹಾಕಲು ಸಂವಿಧಾನ ತಿದ್ದುಪಡಿ ಮಾಡಿದರು ಎಂದು ಹೇಳಿದ್ದಾರೆ.
ದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ದೇಶ ಒಡೆಯುವ ಬಗ್ಗೆ ಮಾತನಾಡಿದವರಿಗೆ ಬೇರೆ ಮಾನದಂಡ ಬಳಸಲಾಯಿತು ಎಂದು ಜೇಟ್ಲಿ ಕಿಡಿ ಕಾರಿದ್ದಾರೆ.